ನವದೆಹಲಿ : ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಆ.25ರಂದು ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿರುವ ಭಾರತ ಸರ್ಕಾರದ ನಿರ್ಧಾರ ಬಾಲಿಶವಾದದ್ದು ಎಂದು ಕಾಶ್ಮೀರ ಪ್ರತ್ಯೇಕವಾದಿ, ಹುರಿಯತ್ ಸಂಘಟನೆಯ ಮುಖಂಡ ಸೈಯದ್ ಶಾ ಗಿಲಾನಿ ಟೀಕಿಸಿದ್ದಾರೆ.
ಗಡಿ ಭಾಗದಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವುದೂ ಅಲ್ಲದೆ ಭಾರತದ ಆಂತರಿಕ ವಿಚಾರದಲ್ಲಿ ತಲೆಹಾಕುತ್ತಿರುವ ಪಾಕಿಸ್ತಾನದೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಯನ್ನು ನರೇಂದ್ರ ಮೋದಿ ಸರ್ಕಾರ ರದ್ದುಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಪ್ರತ್ಯೇಕವಾದಿ ನಾಯಕ, ಭಾರತ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವ ವಿರೋಧಿ ಹಾಗೂ ಬಾಲಿಶವಾದದ್ದು ಎಂದು ಜರೆದಿದ್ದಾರೆ.
ಸರ್ಕಾರದ ಈ ನಿರ್ಧಾರದ ಹೊರತಾಗಿಯೂ ಪಾಕಿಸ್ತಾನ ಹೈಕಮಿಷನರ್ ನ್ನು ಭೇಟಿ ಮಾಡಲು ದೆಹಲಿಗೆ ತೆರಳುವುದಾಗಿ ಸೈಯದ್ ಶಾ ಗಿಲಾನಿ ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರ ವಿವಾದದ ಬಗ್ಗೆ ಚರ್ಚಿಸಲು ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಪ್ರತ್ಯೇಕವಾದಿಗಳಿಗೆ ಆಹ್ವಾನ ನೀಡಿದೆ. ಆ.18ರಂದು ಪ್ರತ್ಯೇಕವಾದಿಗಳು ಪಾಕ್ ಹೈಕಮಿಷನರ್ ರೊಂದಿಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಇನ್ನೂ ಅನೇಕ ಹುರಿಯತ್ ನಾಯಕರು ಪಾಕ್ ರಾಯಭಾರಿ ಅಬ್ದುಲ್ ಬಸಿತ್ ರನ್ನು ಭೇಟಿ ಮಾಡಲಿದ್ದಾರೆ.
ಭಾರತದ ಆಂತರಿಕ ವಿಷಯದಲ್ಲಿ ಪಾಕ್ ಮಧ್ಯಪ್ರವೇಶಿಸುವುದನ್ನು ವಿರೋಧಿಸಿರುವ ಸರ್ಕಾರದ ನಿರ್ಧಾರವನ್ನು ಸೈಯದ್ ಶಾ ಗಿಲಾನಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಬಾಲಿಶ ಎಂದು ಹೀಯಾಳಿಸಿರುವುದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.