ಬೆಳಗಾವಿ : 'ಬೆಳಗಾವಿ' ಕರ್ನಾಟಕದ ಅವಿಭಾಜ್ಯ ಅಂಗ, ಗಡಿ ವಿಚಾರದಲ್ಲಿ ಮಾಹಾರಾಷ್ಟ್ರ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ನ್ಯಾ.ಮಹಾಜನ್ ವರದಿಯೇ ಅಂತಿಮವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದ 3 ವಿಧಾನಸಭೆಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆ.17ರಂದು ಬೆಳಗಾವಿಗೆ ಭೇಟಿ ನೀಡಿ ಮಾತನಾಡಿದ ಸಿ.ಎಂ, 3 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿ, ಶಿವಮೊಗ್ಗ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಂಡ ವೇಳೆ ಜನತೆಯಿಂದ ಕಾಂಗ್ರೆಸ್ ಪರ ಒಲವು ವ್ಯಕ್ತವಾಗುತ್ತಿದೆ ಎಂದಿದ್ದಾರೆ.
15 ತಿಂಗಳ ಸರ್ಕಾರದ ಸಾಧನೆ ಜನತೆ ಮುಂದಿಟ್ಟಿದ್ದೇವೆ. ಜನತೆಗೆ ನೀಡಿದ ಭರವಸೆ ಈಡೇರಿಸುವುದೇ ರಾಜಧರ್ಮ, ಭರವಸೆ ಈಡೇರಿಕೆ ಮೂಲಕ ನಾವು ರಾಜಧರ್ಮವನ್ನು ಪಾಲಿಸಿದ್ದೇವೆ ಎಂದು ಸಿ.ಎಂ ತಿಳಿಸಿದ್ದಾರೆ. ಇದೇ ವೇಳೆ ಕೆ.ಪಿ.ಎಸ್.ಸಿ ನೇಮಕಾತಿ ರದ್ದತಿ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಸರ್ಕಾರದ ಈ ನಿರ್ಧಾರವನ್ನು ರಾಜಕಾರಣಗೊಳಿಸಲಾಗುತ್ತಿರುವುದಕ್ಕೆ ಸಿ.ಎಂ ಕಿಡಿ ಕಾರಿದ್ದಾರೆ.
ಶಿಕಾರಿಪುರ ಹೊರತುಪಡಿಸಿ ಉಳಿದ 2 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ಪಡೆದಿಲ್ಲ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.