ನವದೆಹಲಿ : 'ಸ್ವಾತಂತ್ರ್ಯ ದಿನಾಚರಣೆ' ಹಿನ್ನೆಲೆಯಲ್ಲಿ ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಐತಿಹಾಸಿಕ ಭಾಷಣ ಮಾಡಿದರು.
68ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ, ನಾನು ಈ ದೇಶದ ಪ್ರಧಾನ ಮಂತ್ರಿಯಲ್ಲ ಪ್ರಧಾನ ಸೇವಕ, ಈ ಪ್ರಧಾನ ಸೇವಕ ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳನ್ನು ತಿಳಿಸುತ್ತಿದ್ದೇನೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುತ್ತಾ ಅವರ ಆದರ್ಶದ ನಡೆಯನ್ನು ನಮ್ಮ ಜೀವನದಲ್ಲಿ ಬಳಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶ ಎಂಬುದು ರಾಜಕಾರಣಿಗಳಿಂದ, ಸರ್ಕಾರದಿಂದ ನಿರ್ಮಿತವಾಗಿರುವುದಲ್ಲ, ರೈತರು, ವಿಜ್ನಾನಿಗಳು, ಶಿಕ್ಷಕರಿಂದ ನಿರ್ಮಾಣಗೊಂಡಿದೆ. ಗಡಿಯಲ್ಲಿ ನಿಂತಿರುವ ಯೋಧರು ಭಾರತವನ್ನು ನಿರಂತರವಾಗಿ ಕಾಪಾಡುತ್ತಿದ್ದಾರೆ ಎಂದು ಅವರ ತ್ಯಾಗವನ್ನು ಮೋದಿ ಈ ವೇಳೆ ಸ್ಮರಿಸಿದರು.
ಪ್ರಧಾನಿಗಳು ಲಿಖಿತ ಭಾಷಣ ಓದುವ ಪರಿಪಾಠಕ್ಕೆ ತಿಲಾಂಜಲಿ ಹಾಡಿದ ಪ್ರಧಾನಿ ನರೇಂದ್ರ ಮೋದಿ ಇತಿಹಾಸ ನಿರ್ಮಿಸಿದ್ದಾರೆ. ದೇಶದ ಇತಿಹಾಸದಲ್ಲೇ ಭಾಷಣದ ಪ್ರತಿ ಇರದೇ ಪ್ರಧಾನಿಯೊಬ್ಬರು ಮಾತನಾಡಿದ್ದು ಇದೇ ಮೊದಲು. ಅಲ್ಲದೇ ಇದೇ ಮೊದಲ ಬಾರಿಗೆ ಸಂಸದರ ಹೆಸರಲ್ಲಿ ಆದರ್ಶ ಗ್ರಾಮ ಯೋಜನೆ ಜಾರಿ ಮಾಡಿ ದೇಶಕಟ್ಟುವ ಕೆಲಸ ಗ್ರಾಮೀಣ ಭಾಗದಿಂದ ನಡೆಯಬೇಕು ಎಂದಿದ್ದಾರೆ. ಯುವಜನತೆಯೇ ದೇಶದ ಸಂಪತ್ತು, ಯುವಜನತೆಯನ್ನು ಸಮರ್ಥವಾಗಿ ಬಳಸಿಕೊಂಡು ದೇಶವನ್ನು ಮುನ್ನಡೆಸಬೇಕಿದೆ ಎಂದು ಪ್ರಧಾನಿ ಕರೆ ನೀಡಿದ್ದಾರೆ.
ಜಗತ್ತಿನಾದ್ಯಂತ ಭಾರತದ ಕೀರ್ತಿ ಪಸರಿಸಬೇಕು, ವಿದೇಶದಿಂದ ಆಮದಾಗುವ ವಸ್ತುಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದಿಸೋಣ, ಪ್ರತಿ ಉತ್ಪನ್ನಗಳ ಮೇಡ್ ಇನ್ ಇಂಡಿಯಾ ಎಂಬ ಬರಹ ಕಾಣಬೇಕು, ಆಗ ದೇಶ ಅಭಿವೃದ್ಧಿಯಾಗುತ್ತದೆ ಎಂದರು.
ಕೈಯಲ್ಲಿ ಗನ್ ಹಿಡಿದರೆ ಭೂಮಿಯನ್ನು ಕೆಂಪಾಗಿಸಲು ಮಾತ್ರ ಸಾಧ್ಯ ಅದೇ ನೇಗಿಲು ಹಿಡಿದರೆ ಇಡಿ ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದು. ಹಿಂಸಾ ಮಾರ್ಗದಿಂದ ಏನನ್ನೂ ಸಾಧಿಸಿಸಲು ಸಾಧ್ಯವಿಲ್ಲ, ಭಾರತಕ್ಕೆ ಅಗತ್ಯವಿರುವುದು ಸರ್ವರನ್ನೂ ಒಳಗೊಂಡ ಅಭಿವೃದ್ಧಿ, ಪ್ರತಿ ಪ್ರಧಾನಿ, ಪ್ರತಿ ಸರ್ಕಾರವೂ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರೆಲ್ಲರಿಗೂ ಗೌರವ ಸಮರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಸಂಸದರು ತಮ್ಮ ಗ್ರಾಮಗಳನ್ನು ಪ್ರೀತಿಸಬೇಕು ಮತ್ತು ಅದರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ. ಇದೇ ವೇಳೆ ವೈದ್ಯರು ಹಣ ಮಾಡುವ ಉದ್ದೇಶದಿಂದ ಹೆಣ್ಣು ಶಿಶುಗಳನ್ನು ಕೊಲ್ಲುವುದನ್ನ್ ನಿಲ್ಲಿಸಬೇಕು ಎಂದು ಮೋದಿ ಹೇಳಿದ್ದಾರೆ.
ಜನ್ ಧನ್ ಯೋಜನೆ ಘೋಷಣೆ ಮಾಡಿದ ಮೋದಿ ದೇಶದ ಪ್ರತಿ ಕುಟುಂಬಕ್ಕೂ 1 ಲಕ್ಷ ರು. ಜೀವ ವಿಮೆಯ ಭರವಸೆ ನೀಡಿದ್ದಾರೆ.