ನವದೆಹಲಿ : ಅಸಹನೆಯ ಮತ್ತು ಹಿಂಸೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.14ರ ಸಂಜೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಣಬ್ ಮುಖರ್ಜಿ, ದೇಶದ ಉಳಿವಿಗಾಗಿ ಉಗ್ರಗಾಮಿತ್ವವನ್ನು ಮಟ್ಟ ಹಾಕಬೇಕಿದೆ ಎಂದು ಕರೆ ನೀಡಿದ್ದಾರೆ.
ಅಸ್ಥಿತ್ವದಲ್ಲಿರುವ ಭೂಪಟವನ್ನು ಧರ್ಮದ ಆಧಾರದ ಮೇಲೆ ಬದಲಾವಣೆ ಮಾಡಲು ಉಗ್ರವಾದಿಗಳು ನಡೆಸುತ್ತಿರುವ ಪ್ರಯತ್ನವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಖಂಡಿಸಿದ್ದಾರೆ. ಭಾರತ ಪುರಾತನ ನಾಗರಿಕತೆ ಹೊಂದಿದ ದೇಶವಾದರೂ ಸಹ ಆಧುನಿಕ ಕನಸುಗಳನ್ನು ಹೊತ್ತು ಮುನ್ನಡೆಯುತ್ತಿರುವ ಆಧುನಿಕ ರಾಷ್ಟ್ರವಾಗಿದೆ, ಪಕ್ಷ ಹಾಗೂ ಅಭಿಪ್ರಾಯ ಬೇಧಗಳಿಗಿಂತಲೂ ದೇಶಕ್ಕೆ ಉನ್ನತ ಸ್ಥಾನ ನೀಡಬೇಕಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಬಡತನ ನಿಯಂತ್ರಣಕ್ಕಿಂತಲೂ ಅದರ ನಿರ್ಮೂಲನೆಯತ್ತ ನಾವು ಗುರಿಹೊಂದಬೇಕಿದೆ, ಪಾರದರ್ಶಕತೆ ಹಾಗೂ ಸಮಗ್ರತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಆಡಳಿತ ವ್ಯವಸ್ಥೆಯಲ್ಲಿ ಸೃಜನಾತ್ಮಕ ಚಿಂತನೆಗಳು ಭಾರತಕ್ಕೆ ಅವಶ್ಯವಾಗಿರುವುದಾಗಿ ರಾಷ್ಟ್ರಪತಿಗಳು ತಿಳಿಸಿದ್ದಾರೆ.
ಭಾರತ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ಕ್ರಿಯಾತ್ಮ ಕಾರ್ಯನಿರ್ವಹಣೆ ಅಭಿವೃದ್ಧಿಗೆ ಮೂಲವಾಗಿದ್ದು, ಕ್ರಿಯಾತ್ಮವಾಗಿ ಕೆಲಸ ನಿರ್ವಹಿಸಲು ಇದು ಸಕಾಲ ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.