ನವದೆಹಲಿ : ಸಂಸತ್ ನಲ್ಲಿ ಲೋಕಸಭಾ ಸದಸ್ಯ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಹಿಂದೂಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಹಿಂದೂ ಧರ್ಮದವರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಸಂಸದ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಕೋಮುಗಲಭೆ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಹಿಂದುತ್ವ ದೇಶದ ರಾಷ್ಟ್ರೀಯತೆಯ ಗುರುತು. ಹಿಂದೂ ಧರ್ಮ ಯಾವುದೇ ಒಂದು ಧರ್ಮ ಪರಮೋಚ್ಛ ಎಂದು ಹೇಳುವುದಿಲ್ಲ. ಹಜ್ ಗೆ ಹೋಗುವ ಭಾರತೀಯ ಮುಸ್ಲಿಮರು ಕೂಡ ಹಿಂದೂಗಳೇ ಎಂದಿದ್ದಾರೆ.
1947ರಲ್ಲಿ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲಾಯಿತು. ಈಗ ದೇಶವನ್ನು ಪಾಕಿಸ್ತಾನದ ಅಜೆಂಡಾದ ಮೇಲೆ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ. ಬೆದರಿಕೆಯೊಡ್ಡಿದಲ್ಲಿ ಹಿಂದೂಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ ಎಂದು ಆದಿತ್ಯನಾಥ್ ಕರೆ ನೀಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಸಂಸದ ಮಲ್ಲಿಕಾರ್ಜುನ ಖರ್ಗೆ, ಅಧಿಕಾರಕ್ಕಾಗಿ ಬಿಜೆಪಿ ಹಾಗೂ ಅದರ ಅಂಗಸಂಸ್ಥೆಗಳು ಸಮಾಜವನ್ನು ವಿಭಜಿಸುವ ಕೆಲಸಕ್ಕೆ ಕೈ ಹಾಕಿವೆ. ಇದಕ್ಕೆ ತಕ್ಷಣ ನಿಯಂತ್ರಣ ಹಾಕದಿದ್ದರೆ ಮುಂದೊಂದು ದಿನ ಪಶ್ಚಾತ್ತಾಪ ಪಡೆಬೇಕಾದೀತು ಎಂದು ಎಚ್ಚರಿಸಿದರು. ವಿ.ಎಚ್.ಪಿ, ಬಜರಂಗದಳ ಹಾಗೂ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೆಲ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೋಮು ಸಂಘಟನೆಗಳು ಒಂದಾಗಿವೆ ಎಂದು ಆರೋಪಿಸಿದ್ದರಿಂದ ಮಧ್ಯಪ್ರವೇಶಿಸಿದ ಸಂಸದ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.