ಶ್ರೀನಗರ : ಜಮು-ಕಾಶ್ಮೀರದಲ್ಲಿ ಟೂರಿಸ್ಟ್ ಟ್ಯಾಕ್ಸಿಯನ್ನು ಅಪಹರಿಸಲಾಗಿದೆ. ಈ ಹಿನ್ನಲೆಯಲ್ಲಿ ಜಮು-ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ನಾಲ್ವರು ಶಂಕಿತ ಉಗ್ರರು ಜಮ್ಮು-ಕಾಶ್ಮೀರದ ರಾಮ್ ಬನ್ ನಿಂದ ಈ ಪ್ರವಾಸಿ ಟ್ಯಾಕ್ಸಿಯನ್ನು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಆ.12ರಂದು ಪಂಜಾಬ್ ನಿಂದ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕಾಗಿ ಈ ಟ್ಯಾಕ್ಸಿಯಲ್ಲಿ ಹೊರಟಿದ್ದರು. ಇಲ್ಲಿನ ರಾಮ್ ಬನ್ ನಿಂದ ಟ್ಯಾಕ್ಸಿ ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
ಪಾಂಜಾಬ್ ರಜಿಸ್ಟ್ರೇಷನ್ ಹೊಂದಿರುವ ಈ ಟ್ಯಾಕ್ಸಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಜಮ್ಮು-ಕಾಶ್ಮೀರದ ಎಲ್ಲಾ ರಸ್ತೆಗಳಲ್ಲೂ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಸಧ್ಯದ ಪೊಲೀಸ್ ಮಾಹಿತಿ ಪ್ರಕಾರ, ಪಂಜಾಬ್ ನೊಂದಣಿ ಹೊಂದಿರುವ ಕಾರನ್ನು ಪಂಜಾಬ್ ಭಾಷೆ ಮಾತನಾಡುತ್ತಿದ್ದ ಇಬರು ಬಾಡಿಗೆಗೆ ತೆಗೆದುಕೊಂಡಿದ್ದರು. ಕಾರನ್ನು ಬಾಡಿಗೆಗೆ ಪಡೆದ ಇಬ್ಬರು ಶಂಕಿತ ಉಗ್ರರು ಕಾರ್ ಚಾಲಕನಿಗೆ ತಮ್ಮನ್ನು ಪ್ರವಾಸಿಗರೆಂದು ಪರಿಚಯ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಪಂಜಾಬ್ ನಿಂದ ಜಮ್ಮುಗೆ ತೆರಳುತ್ತಿದ್ದಂತೆಯೇ ತಮ್ಮ ಸ್ನೇಹಿತರು ತಮಗಾಗಿ ಕಾಯುತ್ತಿದ್ದು ಅವರೂ ತಮ್ಮೊಂದಿಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಜಮ್ಮು-ಕಾಶ್ಮೀರದ ಜ್ಯುವೆಲ್ ಚೌಕ್ ಪ್ರದೇಶದ ಬಸ್ ನಿಲ್ದಾಣದಲ್ಲಿ ಇನ್ನಿಬ್ಬರು ಕಾಶ್ಮೀರಿ ಯುವಕರೂ ಸಹ ಪ್ರವಾಸಿಗರೆಂದು ಪರಿಚಯ ಮಾಡಿಕೊಂಡಿದ್ದವರೊಂದಿಗೆ ಸೇರ್ಪಡೆಗೊಂಡಿದ್ದಾರೆ. 4 ಜನ ಶಂಕಿತ ಉಗ್ರರು ಕುಡ್ ಪ್ರದೇಶದಲ್ಲಿ ಆಹಾರ ಸೇವಿಸಿದ ಬಳಿಕ ಪ್ರಯಾಣ ಮುಂದುವರೆಸಿದ್ದಾರೆ.
ಮಾರ್ಗಮಧ್ಯದಲ್ಲಿ ಕಾರ್ ನಲ್ಲಿದ್ದ ಓರ್ವ ಪ್ರವಾಸಿಗ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. 4 ಜನ ಕಾರ್ ಇಳಿದ ನಂತರ ಸಹಾಯಕ್ಕಾಗಿ ಕಾರ್ ಚಾಲಕನನ್ನೂ ಕಾರಿನಿಂದ ಇಳಿಯುವಂತೆ ಸೂಚಿಸಿದ್ದಾರೆ. ಕಾರ್ ಚಾಲಕ ಕೆಳಗಿಳಿಯುತ್ತಿದ್ದಂತೆಯೇ ಆತನನ್ನು ಬೆದರಿಸಿ, ಆತನ ಬಳಿಯಿದ್ದ ಚಾಲನಾ ಪರವಾನಗಿ, ಹಣ ಕಸಿದು ಕಾರು ಸಮೇತ ಪರಾರಿಯಾಗಿದ್ದಾರೆ. ಸ್ವಾತಂತ್ರ್ಯಾ ದಿನಾಚರಣೆ ಹಿನ್ನಲೆಯಲ್ಲಿ ಉಗ್ರರು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.