ಬೆಂಗಳೂರು : ವಿಫಲ ಹಾಗೂ ನಿರುಪಯುಕ್ತ ಕೊಳವೆ ಬಾವಿಗಳನ್ನು ಆಗಸ್ಟ್ 31 ರೊಳಗೆ ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸುಮಾರು 13509 ತೆರೆದ ಕೊಳವೆ ಬಾವಿಗಳಿದ್ದು ಅವುಗಳ ಪೈಕಿ 12,385 ಕೊಳವೆ ಬಾವಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಖಾಸಗಿಯವರು ತೆಗೆಸಿರುವ ಬೋರ್ವೆಲ್ಗಳ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು ವರದಿ ಬಂದ ತಕ್ಷಣ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗುವುದು ಎಂದರು.
ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದ್ದರೂ ಸಮರ್ಪಕವಾಗಿ ಕೆಲಸ ನಡೆದಿಲ್ಲದ್ದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದ ಹೆಚ್.ಕೆ. ಪಾಟೀಲ್ ಅವರು ಇನ್ನು ಮುಂದೆ ಇಂತಹ ಘಟನೆಗಳು ನಡೆದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಆಗಸ್ಟ್ 20 ರ ನಂತರ ತೆರೆದ ಕೊಳವೆ ಬಾವಿಗಳು ಕಂಡು ಬಂದಲ್ಲಿ ಈ ಟೋಲ್ ಫ್ರೀ ನಂಬರ್ಗೆ 18004258666 ದೂರವಾಣಿ ಮಾಡಿ ದೂರು ದಾಖಲಿಸಬಹುದು ಎಂದ ಸಚಿವರು ದೂರವಾಣಿ ಮಾಡುವವರು ತಮ್ಮ ಹೆಸರು ಹಾಗೂ ದೂರವಾಣಿ ಸಂಖ್ಯೆ ಹಾಗೂ ವಿಳಾಸವನ್ನು ಮಾಹಿತಿ ಕೇಂದ್ರಕ್ಕೆ ನೀಡಬೇಕು ಎಂದರು.