ನವದೆಹಲಿ : ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದ 2015-16ರ ಬಜೆಟ್ ರೈವೆ ಬಜೆಟ್ ನಂತೆಯೇ ಕಾಲ್ಪನಿಕ ಬಜೆಟ್ ಮುಂಗಡಪತ್ರವಾಗಿದೆ. ಇದರಲ್ಲಿ ಯಾವ ಸಕಾರಾತ್ಮಕ ಅಂಶಗಳೂ ಇಲ್ಲ. ಇದೊಂದು ನಿರುಪಯುಕ್ತ ಬಜೆಟ್ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಬಜೆಟ್ ಮಂಡನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಜೆಟ್ ಗುಡ್ಡ ಬಗೆದು ಇಲಿ ಹಿಡಿದಂತಾಗಿದೆ ಎಂದರು. ಈ ಬಜೆಟ್ನಲ್ಲಿ ಹೆಸರಿಸುವಂತಹ ಯಾವುದೇ ಅಂಶಗಳು ಇಲ್ಲ. ಇದು ಜನಸಾಮಾನ್ಯರ ಪರ ಬಜೆಟ್ ಅಲ್ಲ. ಶ್ರೀಮಂತರ ಬಜೆಟ್. ಬಡವರು ಬಳಸುವ ಎಲ್ಲ ವಸ್ತುಗಳು ದುಬಾರಿಯೇ ಆಗಿವೆ ಎಂದು ಹೇಳಿದರು.
ಜನ ಈ ಬಜೆಟ್ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ.ಬಜೆಟ್ನಲ್ಲಿ ಜನಸಾಮಾನ್ಯರ ನಿರೀಕ್ಷೆಗಳನ್ನು ಕಡೆಗಣಿಸಲಾಗಿದೆ, ಇದು ಬರೀ ದೂರದೃಷ್ಟಿಯ ದಾಖಲೆ ಅಷ್ಟೇ ಎಂದು ಟೀಕಿಸಿದ್ದಾರೆ.