ನವದೆಹಲಿ : ಲೋಕಸಭೆಯ ಉಪಸಭಾಧ್ಯಕ್ಷರಾಗಿ ಎಐಎಡಿಎಂಕೆಯ ಸಂಸದ ಎಂ.ತಂಬಿದೊರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಂಬಿದೊರೈ ಅವರ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ಜ್ಯೋತಿರಾದಿತ್ಯ ಸಿಂಧ್ಯಾ ಕೂಡ ಅನುಮೋದನೆ ನೀಡಿದರು. ವಿಪಕ್ಷ ಹಾಗೂ ಆಡಳಿತ ಪಕ್ಷ ಜತೆಯಾಗಿ ಉಪಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಮಧ್ಯಸ್ಥಿಕೆದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಐಎಡಿಎಂಕೆ ಸದಸ್ಯರ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿಯೂ ಹಿಡಿತ ಸಾಧಿಸಲು ಎನ್.ಡಿ.ಎ ಈ ತಂತ್ರಗಾರಿಕೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಮೇಲ್ಮನೆಯಲ್ಲಿ ಒಟ್ಟು 250 ಸದಸ್ಯರ ಬಲವಿದ್ದು, ಆಢಳಿತಾರೂಢ ಎನ್.ಡಿ.ಎಗೆ ಕೇವಲ 46 ಸ್ಥಾನಗಳಿರುವುದರಿಂದ ಅನ್ಯ ಪಕ್ಷಗಳ ಬೆಂಬಲ ಪಡೆಯುವುದು ಅಗತ್ಯವಾಗಿದೆ. ಸರಳ ಬಹುಮತ ಪಡೆಯಲು ಕನಿಷ್ಟ 126 ಸದಸ್ಯರ ಬೆಂಬಲ ಎನ್.ಡಿ.ಎಗೆ ಅಗತ್ಯವಿದೆ. ಲೋಕಸಭೆಯಲ್ಲಿ ಮಂಡನೆಯಾಗಿರುವ ನ್ಯಾಯಮೂರ್ತಿಗಳ ನೇಮಕಾತಿ ಬಿಲ್ ಸೇರಿದಂತೆ ಮಹತ್ವದ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ ಪಡೆಯಲು ಇಂತಹ ಹೊಂದಾಣಿಕೆ ಅನಿವಾರ್ಯವಾಗಿದೆ.