ಲೇಹ್ : ಜಮ್ಮು-ಕಾಶ್ಮೀರದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಲೇಹ್ ನಲ್ಲಿ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿದ್ದಾರೆ.
ಲೇಹ್ ನಲ್ಲಿ ಶ್ರೀನಗರ್ ಟ್ರಾನ್ಸ್ ಮಿಷನ್ ಲೈನ್ ಗೆ ಶಿಲನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರ ಅಭಿವೃದ್ಧಿಯತ್ತ ಸಾಗುತ್ತಿದೆ. ಸಾಮಾನ್ಯ ಜನರ ಜೀವನದಲ್ಲಿಯೂ ಬದಲಾವಣೆಯಾಗಬೇಕು, ಅಂತಹ ಅಭಿವೃದ್ಧಿಯಾಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶ್ರಮಿಸಲಿದೆ. ಬಿಜೆಪಿ ಕಾರ್ಯಕರ್ತನಾಗಿ ಇಲ್ಲಿ ಕೆಲಸಮಾಡುತ್ತೇನೆ. ಜಮ್ಮು-ಕಾಶ್ಮೀರದಲ್ಲಿ ಕೇಸರಿ ಕ್ರಾಂತಿಯಾಗಬೇಕಿದೆ. ಲೇಹ್ ನಲ್ಲಿರುವ ಜನರ ಕಷ್ಟಗಳ ಬಗ್ಗೆ ನನಗೆ ಅರಿವಿದೆ. ಲೇಹ್ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಇಲ್ಲಿ ಸೋಲಾರ್ ಯೋಜನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ದೇಶದ ಪ್ರತಿಯೊಂದು ಮೂಲೆಗೂ ಸಂಪರ್ಕ ಕಲ್ಪಿಸಲು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದ ಪ್ರಧಾನಿ ಮೋದಿ, ಲಡಾಕ್ ಗೆ ಯಾರೊಬ್ಬ ಪ್ರಧಾನಿಯೂ ಭೇಟಿ ನೀಡಲು ಮುಂದಾಗುತ್ತಿರಲಿಲ್ಲ, ಆದರೆ ಒಂದು ತಿಂಗಳಲ್ಲಿ ಎರಡು ಭಾರಿ ತಾವು ಭೇಟಿ ನೀಡಿರುವುದಾಗಿ ತಿಳಿಸಿದರು. ಅಲ್ಲದೇ ಲಡಾಕ್ ಗೆ ನನ್ನ ಸೇವೆ ಅರ್ಪಿಸಲು ಬಂದಿದ್ದೇನೆ ಎಂದರು.
ದೇಶದಲ್ಲಿ ಎಲ್ಲವೂ ಸರಿಯಾಗಿದೆಯಾದರೂ ಬಡತನ ಮಾತ್ರ ನಿರ್ಮೂಲನೆಯಾಗಿಲ್ಲ, ಬಡತನ ನಿರ್ಮೂಲನೆ ಮಾಡುವುದೇ ನಮ್ಮ ಮೊದಲ ಗುರಿ ಎಂದು ತಿಳಿಸಿದರು.