ಜಮ್ಮು-ಕಾಶ್ಮೀರ : ನಿರಾಶ್ರಿತ ಕಾಶ್ಮೀರಿ ಪಂಡಿತರ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದ್ದಾರೆ.
ಮಂಗಳವಾರ, ಆ.೧೨ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಜಲವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿ, ಕಾಶ್ಮೀರಿ ಪಂಡಿತರು, ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು, ಉಗ್ರರ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಸಂತ್ರಸ್ತರನ್ನು ನಿರ್ಲಕ್ಷಿಸುವ ದಿನಗಳು ದೂರವಾಗಿದೆ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಜನಸಂಖ್ಯೆಯ ಶೇ.20ರಷ್ಟು ಜನರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿ, ಅವರ ಮಾತೃಭೂಮಿಯಲ್ಲಿ ಜೀವನ ನಡೆಸಲು ಅವಕಾಶ ನೀಡಬೇಕಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರದಿಂದ ದೂರ ತಳ್ಳಲ್ಪಟ್ಟಿರುವ ಜನಸಂಖ್ಯೆಗೆ ಪುನರ್ವಸತಿ ಕಲ್ಪಿಸಿದರೆ ಅವರು ಇಡಿ ರಾಜ್ಯದ ಹಣೆಬರಹವನ್ನು ಬದಲಾಯಿಸಲಿದೆ. 2 ಲಕ್ಷಕ್ಕೂ ಹೆಚ್ಚು ಭಾರತದ ಜನರು ಪಾಕಿಸ್ತಾನದಿಂದ ನಿರಾಶ್ರಿತರಾಗಿದ್ದಾರೆ. 4ಲಕ್ಷಕ್ಕೂ ಹೆಚ್ಚು ಜನ ಕಾಶ್ಮೀರಿ ಪಂಡಿತರು, 8-10 ಲಕ್ಷಕ್ಕೂ ಹೆಚ್ಚು ಜನ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಇವರೆಲ್ಲರೂ ನಮ್ಮ ಸೋದರ ಸೋದರಿಯರು ಇವರ ಬಗ್ಗೆಯೂ ನಾವು ಯೋಚನೆ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಭಿವೃದ್ಧಿಗೆ ಭ್ರಷ್ಟಾಚಾರವೇ ದೊಡ್ಡ ಶತೃ:
ನಾವು ಅಭಿವೃದ್ಧಿ ಪಥದಲ್ಲಿ ಸಾಗಬೇಕಿದ್ದರೆ ಭ್ರಷ್ಟಾಚಾರವನ್ನು ಬುಡ ಸಮೇತ ನಾಶಮಾಡಬೇಕು, ಭ್ರಷ್ಟಾಚಾರ ಸಾಂಕ್ರಾಮಿಕ ರೋಗವಿದ್ದಂತೆ ಅದನ್ನು ಸಂಪೂರ್ಣವಾಗಿ ನಾಶ ಮಾಡಿದ ನಂತರ ಅಭಿವೃದ್ಧಿ ಪಥ ಸುಗಮವಾಗಲಿದೆ ಎಂದಿದ್ದಾರೆ.
ನಾನೂ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಇತರರನ್ನೂ ಭ್ರಷ್ಟಾಚಾರದಲ್ಲಿ ತೊಡಗಲು ಬಿಡುವುದಿಲ್ಲ, ನನ್ನ ಮಂತ್ರ ಏನಿದ್ದರೂ ಅಭಿವೃದ್ಧಿಯೊಂದೇ ಎಂದು ಮೋದಿ ತಿಳಿಸಿದ್ದಾರೆ.