ಲಾಲ್ ಪುರ : ಹಣದಿಂದ ಮಾತ್ರ ನೇಕಾರರ ಅಭಿವೃದ್ಧಿಯಾಗಲ್ಲ, ದೂರದೃಷ್ಟಿಯೂ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಉತ್ತರಪ್ರದೇಶದ ಲಾಲ್ ಪುರದಲ್ಲಿ ನೇಕಾರರ ವ್ಯಾಪಾರ ಕೇಂದ್ರಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಾನು ಇಂದು ನನ್ನವರ ಬಳಿ ಬಂದಿದ್ದೇನೆ. ನಾನು ಇಲ್ಲಿಗೆ ಬಂದಿದ್ದು ನಿಮ್ಮ ಸೇವೆ ಮಾಡಲು. ಬನಾರಸ್ ನನ್ನನ್ನು ತನ್ನವನನ್ನಾಗಿಸಿಕೊಂಡಿದೆ. ನನ್ನವರ ಬಳಿ ಆಗಮಿಸಿದ್ದರ ಸಂತೋಷವೆ ಬೇರೆ. ನಿಮ್ಮೊಂದಿಗೆ ಎರಡು ದಿನಗಳ ಕಾಲ ಇರುತ್ತೇನೆ ಎಂದರು.
ನೇಕಾರರು ಗಂಗಾ-ಯಮುನಾ ಸಂಸ್ಕೃತಿಯನ್ನು ಉಳಿಸಿದ್ದಾರೆ. ಕೃಷಿ ನಂತರ ಜವಳಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಕಡು ಬಡವರಿಗೆ ಉದ್ಯೋಗ ನೀಡಿದೆ. ಕೇವಲ ಹಣದಿಂದ ನೇಕಾರರ ಅಭಿವೃದ್ಧಿಯಾಗಲ್ಲ, ದೂರದೃಷ್ಟಿಯೂ ಅಗತ್ಯ ಎಂದು ತಿಳಿಸಿದರು.
ನೇಕಾರರು ಆಧುನಿಕ ಗ್ರಾಹಕರನ್ನು ಸೆಳೆಯುವುದು ಕಷ್ಟಕರ. ಹೀಗಾಗಿ ಉದ್ಯಮದಲ್ಲಿ ತಂತ್ರಜ್ನಾನಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ ಮೋದಿ, ಆಧುನಿಕ ತಂತ್ರಜ್ನಾನಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ನೇಕಾರರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಜವಳಿ ಉದ್ಯಮ ಇಂದಿಗೂ ತನ್ನದೇ ಪ್ರಾಮುಖ್ಯತೆ ಉಳಿಸಿಕೊಂಡಿದೆ. ವಿದೇಶಗಳ ಜತೆ ನಾವು ಸ್ಪರ್ಧೆ ಮಾಡಬೇಕಿದೆ. ತಂತ್ರಜ್ನಾಗಳ ಅವಿಷ್ಕಾರದಿಂದ ಯಂತ್ರಗಳ ನಿರ್ಮಾಣವಾಗಬೇಕಿದೆ, ವೈಜ್ನಾನಿಕ ರೀತಿಯಲ್ಲಿ ಮಾನವ ಸಂಪನ್ಮೂಲಗಳ ಅಭಿವೃದ್ಧಿಯಾಗಬೇಕಿದೆ, ಹೊಸ ತಲೆಮಾರು ಗೌರವದಿಂದ ಕಾಣುವಂತಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೆ ತಾಯಂದಿರಿಗೆ ತಮ್ಮ ಮಗಳ ಮದುವೆಯಲ್ಲಿ ಬನಾರಸ್ ಸೀರೆಯನ್ನು ಉಡುಗೊರೆ ನೀಡಬೇಕೆಂಬ ಆಸೆ ಇರ್ತಿತ್ತು. ದೇಶಾದ್ಯಂತ ಬನಾರಸ್ ಸೀರೆ ಮಾರುಕಟ್ಟೆಗಳನ್ನು ವಿಸ್ತರಿಸಬೇಕಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಬೇಕೆಂದರೆ ಉತ್ಪಾದನೆಯ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಬನಾರಸ್ ಉತ್ಪನ್ನ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಬೇಕು ಎಂದು ಸಲಹೆ ನಿಡಿದರು.