ಹೈದ್ರಾಬಾದ್ : ಪ್ರಧಾನಿ ನರೇಂದ್ರ ಮೋದಿ ಒಬ್ಬ ಪ್ಯಾಸಿಸ್ಟ್ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾಮಾನ್ಯ ರಾಜಧಾನಿಯಾಗಿರುವ ಹೈದ್ರಾಬಾದ್ ನ ಕಾನೂನು ಸುವ್ಯವಸ್ಥೆ ವಿಶೇಷ ಹೊಣೆಗಾರಿಕೆಯನ್ನು ರಾಜ್ಯಪಾಲ ನರಸಿಂಹನ್ ಅವರಿಗೆ ವಹಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯು ನರೇಂದ್ರ ಮೋದಿ ಸರ್ಕಾರ ಹಾಗೂ ತೆಲಂಗಾಣದ ಕೆ.ಚಂದ್ರಶೇಖರ ರಾವ್ ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.
ರಾಜ್ಯದ ಆಳ್ವಿಕೆಯಲ್ಲಿ ಮೂಗು ತೂರಿಸುತ್ತಿರುವ ಮೋದಿ ಒಬ್ಬ ಪ್ಯಾಸಿಸ್ಟ್ ಎಂದು ಚಂದ್ರಶೇಖರ ರಾವ್ ಗುಡುಗಿದ್ದಾರೆ. ಇನ್ನು ರಾವ್ ಅವರ ಪುತ್ರ, ಸಚಿವ ಕೆ.ರಾಮರಾವ್ ಕೇಂದ್ರದ ಈ ಸೂಚನೆ ಕಂಡು ಕೇಳರಿಯದದಂಥದ್ದು ಎಂದಿದ್ದಾರೆ.
ಆದರೆ ಚಂದ್ರಶೇಖರ ರಾವ್ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಪ್ಯಾಸಿಸ್ಟ್ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಹೈದ್ರಾಬಾದ್ ನಲ್ಲಿರುವ ಜನರ ಮೂಲ ತಿಳಿಯುವ ಕೆಲಸಕ್ಕೆ ಕೆಸಿಆರ್ ಸರ್ಕಾರ ಮುಂದಾಗಿದೆ. ನೀವು ಯಾವ ರಾಜ್ಯದವರು, ಮಾತನಾಡುವ ಭಾಷೆ ಯಾವುದು, ಇಲ್ಲಿಗೆ ಯಾವಾಗ ಬಂದಿದ್ದು ಎಂಬ ಸರ್ಕಾರದ ಪ್ರಶ್ನೆಗಳಿಗೆ ಹೈದ್ರಾಬಾದ್ ಜನತೆ ಈಗ ಉತ್ತರಿಸಬೇಕಿದೆ. ಹೈದ್ರಾಬಾದ್ ಮತ್ತು ತೆಲಂಗಾಣದಲ್ಲಿ ವಾಸವಿರುವ ಸೀಮಾಂಧ್ರ ಭಾಗದ ಜನರನ್ನು ಗುರುತಿಸಲು ಸಮೀಕ್ಷೆಯೊಂದನ್ನು ಕೈಗೊಳ್ಳುವುದಕ್ಕೆ ತೆಲಂಗಾಣ ಸರ್ಕಾರ ನಿರ್ಧರಿಸಿರುವುದೇ ಇದಕ್ಕೆ ಕಾರಣ.
ತೆಲಂಗಾಣ ಸರ್ಕಾರದ ಈ ನಿರ್ಧಾರಕ್ಕೆ ಆಂಧ್ರಪ್ರದೇಶ ಸರ್ಕಾರ ಸಿಡಿಮಿಡಿಗೊಂಡಿದ್ದು, ಹೈದ್ರಾಬಾದ್ ನಲ್ಲಿ ಸೀಮಾಂಧ್ರಭಾಗದ ಜನರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು, ಈ ಮಾಹಿತಿ ತಿಳಿಯಲು ಮತ್ತು ಸೀಮಾಂಧ್ರದವರನ್ನು ಟಾರ್ಗೆಟ್ ಮಾಡಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಆಂಧ್ರ ಸರ್ಕಾರ ಆರೋಪಿಸಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ತೆಲಂಗಾಣ ಸರ್ಕಾರ, ಸರ್ಕಾರದ ಯೋಜನೆಗಳ ನೈಜ ಫಲಾನುಭವಿಗಳನ್ನು ಗುರುತಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.