ನವದೆಹಲಿ : ಪ್ರವಾಹದಲ್ಲಿ ಸಿಲುಕಿ ಕೊಚ್ಚಿಹೋಗಿ ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕ ಭಾರತೀಯ ಯೋಧ ಸತ್ಯಶೀಲ್ ಯಾದವ್ ಅವರನ್ನು ಪಾಕಿಸ್ತಾನ ಸೇನೆ, ಭಾರತ ಸೇನೆಗೆ ಹಸ್ತಾಂತರಿಸಿದೆ.
ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಚೆಕ್ ಪೋಸ್ಟ್ ಗೆ ಬಿ.ಎಸ್.ಎಫ್ ಯೋಧ ಯಾದವ್ ಅವರನ್ನು ಕರೆತಂದ ಪಾಕ್ ಸೇನೆ, ಭಾರತೀಯ ಯೋಧರಿಗೆ ಹಸ್ತಾಂತರಿಸಿದೆ.
ಪ್ರವಾಹದಲ್ಲಿ ಕೊಚ್ಚಿಹೋಗಿ ಪಾಕ್ ನೆಲೆ ತಲುಪಿದ್ದ ಬಿಎಸ್.ಎಫ್.ಯೋಧನನ್ನು ಪಾಕಿಸ್ತಾನ ಸೇನೆ, ಪಾಕಿಸ್ತಾನ ಗಡಿ ಪ್ರವೇಶಿಸಿದ ಆರೋಪದಡಿ, ಬಂಧಿಸಿ ವಶದಲ್ಲಿಟ್ಟುಕೊಂಡಿತ್ತಲ್ಲದೇ ವಿಚಾರಣೆ ನಡೆಸಿತ್ತು.
ಆ.6ರಂದು ಸುಶೀಲ್ ಯಾದವ್ ತಮ್ಮ ಮೂವರು ಸಹಚರರೊಂದಿಗೆ ಪರಗ್ವಾರ್-ಖೌರ್ ಪ್ರದೇಶದ ಚಿನಾಬ್ ನದಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಬೋಟ್ ಮಗುಚಿಬಿದ್ದ ಪರಿಣಾಮ ಉಳಿದ ಯೋಧರೆಲ್ಲರೂ ನದಿಗೆ ಹಾರಿ ಬಚಾವಾದರು. ಆದರೆ ಯಾದವ್ ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಪಾಕ್ ನ ಸಿಯಾಲ್ ಕೋಟ್ ಪ್ರದೇಶದ 400 ಮೀ.ಒಳಗೆ ಪ್ರವೇಶಿಸಿದ್ದರು. ಅಲ್ಲಿನ ಹಳ್ಳಿಗರು ಅವರನ್ನು ಹಿಡಿದು ಪಾಕ್ ಸೇನೆಗೆ ಒಪ್ಪಿಸಿದ್ದರು.
ಆ.7ರಂದು ಗಡಿ ಪ್ರದೇಶದಲ್ಲಿ ಉಭಯ ದೇಶಗಳು ಧ್ವಜ ಸಭೆ ನಡೆಸಿದ್ದರು. ಬಿ.ಎಸ್.ಎಫ್ ಯೋಧ ಸತ್ಯಶೀಲ ಯಾದವ್ ರನ್ನು ವಾಪಸ್ ಕಳಿಸುವಂತೆ ಭಾರತೀಯ ಸೇನೆ ಮಾಡಿದ್ದ ಮನವಿಗೆ ಪಾಕ್ ಸೇನೆ ಸಮ್ಮತಿ ಸೂಚಿಸಿತ್ತು. ಈ ನಿಟ್ಟಿನಲ್ಲಿ ಈಗ ಸತ್ಯಶೀಲ್ ಯಾದವ್ ರನ್ನು ಪಾಕ್ ಸೇನೆ ಭಾರತಕ್ಕೆ ಹಸ್ತಾಂತರಿಸಿದೆ.
ಹಸ್ತಾಂತರಕ್ಕೂ ಮುನ್ನ ಪಾಕಿಸ್ತಾನದಲ್ಲಿ ಮಾತನಾಡಿದ ಸತ್ಯಶೀಲ್, ನನ್ನ ನಿರೀಕ್ಷೆಗಿಂತಲೂ ಚೆನ್ನಾಗಿಯೇ ಪಾಕ್ ಸೇನೆ ನನ್ನನ್ನು ನೋಡಿಕೊಂಡಿತು. ಇದರಿಂದ ನನಗೆ ಸಂತೋಷವಾಗಿದೆ. ಚಿನಾಬ್ ನದಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಬೋಟ್ ಆಕಸ್ಮಿಕವಾಗಿ ಮಗುಚಿಬಿತ್ತು. ನನ್ನ ಸಹೋದ್ಯೋಗಿಗಳಿಗೆ ಈಜು ಬರುತ್ತಿತ್ತು. ಆದರೆ ನನಗೆ ಈಜು ಬಾರದ ಕಾರಣ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಸಿಯಾಲ್ ಕೋಟ್ ತಲುಪಿದ್ದೆ, ಪಾಕ್ ಸೈನಿಕರು ರಕ್ಷಿಸಿದರು ಎಂದು ತಿಳಿಸಿದ್ದಾರೆ.