ಲಖ್ನೌ : 'ಉತ್ತರ ಪ್ರದೇಶ'ದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಲವ್ ಜಿಹಾದ್ ಗೆ ಕಡಿವಾಣ ಹಾಕಲು ಆರ್.ಎಸ್.ಎಸ್ ಕಾರ್ಯತಂತ್ರ ರೂಪಿಸಿದೆ. ರಕ್ಷಾಬಂಧನದ ಮೂಲಕ ಪಶ್ಚಿಮ ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನ್ನು ತಡೆಗಟ್ಟಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೀರ್ಮಾನಿಸಿದೆ.
ಪಶ್ಚಿಮ ಉತ್ತರ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಆ.10ರಿಂದ 17ರವರೆಗೆ ರಕ್ಷಾಬಂಧನ ಜಾಗೃತಿ ಜಾಥ ನಡೆಯಲಿದ್ದು, ಮಹಿಳೆಯರಿಂದ ಕಾರ್ಯಕರ್ತರು ರಾಖಿ ಕಟ್ಟಿಸಿಕೊಳ್ಳಲಿದ್ದು ರಾಖಿ ಕಟ್ಟಿದ ಮಹಿಳೆ, ಯುವತಿಯರನ್ನು ರಕ್ಷಿಸುವ ಪ್ರತಿಜ್ನೆ ಮಾಡಲಿದ್ದಾರೆ. ಸುಮಾರು 10 ಲಕ್ಷ ಹಿಂದೂಗಳಿಗೆ ರಾಖಿ ಕಟ್ಟಿಸಲು ಆರ್.ಎಸ್.ಎಸ್ ಚಿಂತನೆ ನಡೆಸಿದೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿರುವ ಪ್ರತಿಯೊಬ್ಬ ಆರ್.ಎಸ್.ಎಸ್ ಕಾರ್ಯಕರ್ತನೂ ಕನಿಷ್ಠ 100 ರಾಖಿ ಕಟ್ಟಿಸಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ. ಮಹಿಳೆಯರು ಹಾಗೂ ಪುರುಷರು ಪರಸ್ಪರ ರಾಖಿ ಕಟ್ಟಲಿದ್ದಾರೆ ಎಂದು ಸ್ಥಳೀಯ ಪ್ರಚಾರಕರಾದ ರಾಜೇಶ್ವರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಉತ್ತರಪ್ರದೇಶದಲ್ಲಿ ಬಲವಂತದ ಮತಾಂತರ, ಲವ್ ಜಿಹಾದ್ ಎಗ್ಗಿಲ್ಲದೇ ನಡೆಯುತ್ತಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿರುವವರ ಹೆಸರನ್ನು ಬಹಿರಂಗಪಡಿಸಿ, ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಬಿಜೆಪಿ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮತಾಂತರವಾಗುವವರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಇತ್ತೀಚೆಗಷ್ಟೇ ಹಿಂದೂ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಮತಾಂತರವಾಗಲು ಒತ್ತಾಯ ಮಾಡಲಾಗಿತ್ತು. ಈ ಘಟನೆಯಲ್ಲಿ ಮತಾಂತರವಾಗುವ ಬಗ್ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆಯೇ ಎಂಬುದನ್ನು ಸರ್ಕಾರ ಜನತೆಗೆ ತಿಳಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಲವ್ ಜಿಹಾದ್ ತಡೆಗಟ್ಟಲು ಆರ್.ಎಸ್.ಎಸ್ ಇದೇ ರೀತಿಯ ಹಲವು ಜಾಗೃತಿ ಜಾಥಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.