ಬೆಂಗಳೂರು : 2011ರ ಕೆಪಿಎಸ್ ಸಿ ನೇಮಕಾತಿ ರದ್ದು ಮಾಡಿರುವ ಸರ್ಕಾರದ ನಿರ್ಧಾರ ಸರಿಯಾಗಿದೆ. ಕಾನೂನಾತ್ಮಕ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2011ರ ಕೆಪಿಎಸ್ ಸಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಐಡಿ ವರದಿ ನೀಡಿದೆ. ವರದಿ ಆಧರಿಸಿ ಸರ್ಕಾರ ನೇಮಕಾತಿ ರದ್ದು ಮಾಡಿದೆ ಎಂದರು.
ನೇಮಕಾತಿ ರದ್ದು ಮಾಡಿರುವ ವಿಚಾರದಲ್ಲಿ ಸರ್ಕಾರ ಕಾನೂನು ಸಲಹೆ ಪಡೆದಿದೆ. ಅಡ್ವಕೆಟ್ ಜನರಲ್ ರಿಂದಲೂ ಸಲಹೆ ಪಡೆಯಲಾಗಿದೆ. 2011ರ ಕೆಪಿಎಸ್ ಸಿ ನೇಮಕಾತಿ ರದ್ದು ಆದೇಶದಲ್ಲಿ ಸರ್ಕಾರ ಎಡವಿಲ್ಲ ಎಂದು ತಿಳಿಸಿದರು.
ನೇಮಕಾತಿಯಲ್ಲಿ ತಪ್ಪಾಗಿದೆ, ಭ್ರಷ್ಟಾಚಾರ ನಡೆದಿದೆ ಎಂದು ತನಿಖಾ ಸಂಸ್ಥೆ ವರದಿ ನೀಡಿದಾಗ ಕಾನೂನು ಕ್ರಮ ಕೈಗೊಳ್ಳದೇ ಸುಮ್ಮನಿರಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ನೇಮಕಾತಿ ರದ್ದು ಮಾಡಿರುವುದರಿಂದ ಕೆಲ ಅಭ್ಯರ್ಥಿಗಳಿಗೆ ನೋವಾಗಿರಬಹುದು. ಆದರೆ ಅಕ್ರಮ ನಡೆದಿದೆ ಎಂದು ದೂರಿದ್ದ ಅಭ್ಯರ್ಥಿಗಳಿಗೆ ನೇಮಕಾತಿಯಿಂದ ನೋವುಂಟಾಗಿತ್ತು. ಹೀಗಾಗಿ ನಾವು ಕಾನೂನಾತ್ಮಕ ರೀತಿಯಲ್ಲಿ ಯೋಚಿಸಿ ಕ್ರಮಕೈಗೊಳ್ಳಬೇಕಾಯಿತು ಎಂದರು.
ಈ ಹಿಂದೆ ಸದನದಲ್ಲಿ ವಿಪಕ್ಷಗಳೇ ಕೆಪಿಎಸ್ ಸಿ ನೇಮಕಾತಿಯಲ್ಲಿ ಅಕ್ರಮನಡೆದಿದೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದವು. ಈಗ ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ. ಈಗ ನೇಮಕಾತಿ ರದ್ದು ವಾಪಸ್ ಪಡೆಯಿರಿ ಎಂದು ಹೇಳುತ್ತಿದ್ದಾರೆ. ವಿಪಕ್ಷಗಳು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ ಎಂದು ಗುಡುಗಿದರು.
ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಿಳಿದು ಬಂದರೂ ಅದನ್ನು ಒಪ್ಪಿಸುಮ್ಮನಿರಲು ಸಾಧ್ಯವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಈಗ ಹೆಚ್.ಡಿ.ಕುಮಾರಸ್ವಾಮಿಯವರು ಅಭ್ಯರ್ಥಿಗಳ ಪರವಾಗಿ ಯಾಕೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರಿಗೆ ಕಾನೂನಿನ ಬಗ್ಗೆ ತಿಳಿದಿಯೋ ಇಲ್ಲವೋ ಗೊತ್ತಾಗುತ್ತಿಲ್ಲ ಎಂದರು.
ವಿಪಕ್ಷಗಳು ಸದನದಲ್ಲಿ ಹೇಳಿದ್ದು ಕೆಪಿಎಸ್ ಸಿ ನೇಮಕಾತಿಯಲ್ಲಿ ಅಕ್ರಾವಾಗಿದೆ. ಅಕ್ರಮ ನಡೆಸಿದ ಅಭ್ಯರ್ಥಿಗಳ ಬಗ್ಗೆ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದರು. ಆದರೆ ಸಿದ್ದರಾಮಯ್ಯ ವಿಪಕ್ಷಗಳ ಹೇಳಿಕೆಯನ್ನು ತಿರುಚಿ ವಿಪಕ್ಷಗಳೇ ನೇಮಕಾತಿ ರದ್ದು ಮಾಡಲು ಒತ್ತಾಯಿಸದ್ದವು ಈಗ ರಾಜಕಾರಣ ಮಾಡುತ್ತಾರೆ ಎಂದು ಹೇಳುವ ಮೂಲಕ ವಿವೇಚನೇ ಇಲ್ಲದೇ ಮುಖ್ಯಮಂತ್ರಿಗಳು ನಡೆದುಕೊಳ್ಳುತ್ತಿದ್ದಾರೆ. ವಿಪಕ್ಷಗಳ ರಾಜಕಾರಣ ಎಂದೇ ಇರಲಿ ಆದರೆ ಸರ್ಕಾರ ಕೆಪಿಎಸ್ ಸಿಯಲ್ಲಿ ತಮಗೆ ಬೇಕಾದವರನ್ನು ನೇಮಕಮಾಡಿಕೊಳ್ಳುವ ಉದ್ದೇಶದಿಂದ ಈಗ 362 ಅಭ್ಯರ್ಥಿಗಳ ನೇಮಕಾತಿ ರದ್ದು ಮಾಡಿ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯಕ್ಕೂ ಚಪ್ಪಡಿಕಲ್ಲು ಎಳೆದು ಅದನ್ನೇ ಸಮರ್ಥಿಸಿಕೊಳ್ಳುತ್ತಿರುವುದು ವಿಪರ್ಯಾಸ.
ಈಗ ಸರ್ಕಾರ ಮತ್ತೆ ಪರೀಕ್ಷೆ ಕರೆದು ಮರುಪರೀಕ್ಷೆ ನಡೆಸುವುದಾದರೂ ಯಾವಾಗ? ನಾವು ಮತ್ತೆ ಹೊಸದಾಗಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಲು ಅದೇನು ಎಲ್ ಕೆ ಜಿ ಅಥವಾ ಪ್ರೈಮರಿ ಸ್ಕೂಲ್ ಎಕ್ಸಾಂಗಳೇ? ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಅಥವಾ ಕೆಪಿಎಸ್ ಸಿ ಪರೀಕ್ಷೆ ಎಂದರೇನು ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ಜ್ನಾನವೇ ಇಲ್ಲವೇ? ರಾಜ್ಯದ ಮುಖ್ಯಮಂತ್ರಿಗಳಾಗಿ ನೈತಿಕತೆಯನ್ನೂ ಮರೆತಂತೆ ವರ್ತಿಸುತ್ತಿರುವುದು ದುರಂತವೆ ಸರಿ ಎಂಬುದು ಅಭ್ಯರ್ಥಿಗಳ ಅಳಲು.