ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾಭಿವೃದ್ಧಿಯಾಗುತ್ತಿಲ್ಲ ಎಂದು ಹೇಳಿರುವ ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಬುದ್ದಿ ಸ್ಥಿಮಿತದಲ್ಲಿಲ್ಲ ಎಂದು ಪಶ್ಚಿಮ ಬಂಗಾಳ ವಿತ್ತ ಸಚಿವ ಅಮಿತ್ ಮಿತ್ರ ಹೇಳಿದ್ದಾರೆ.
ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರತನ್ ಟಾಟಾ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾ ಅಭಿವೃದ್ಧಿ ಹೊಂದುತ್ತಿರುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಮಿತ್ರ ಟಾಟಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅನಿಲ್ ಅಂಬಾನಿ ಗ್ರೂಪ್ ಹಾಗೂ ಇಮಾಮಿ ಸಂಸ್ಥೆ ಸೇರಿ ರಾಜ್ಯದಲ್ಲಿ ಸಿಮೆಂಟ್ ಘಟಕಗಳನ್ನು ತೆರೆಯಲು ಸಿದ್ಧತೆ ನಡೆಸಿವೆ, ಟಾಟಾ ಗ್ರೂಪ್ ನ ಟಿಸಿಎಸ್ ಸಂಸ್ಥೆಯು ಪಶ್ಚಿಮ ಬಂಗಾಳದಲ್ಲಿ ಹೆಚ್ಚುವರಿಯಾಗಿ 20 ಸಾವಿರ ಹುದ್ದೆಗಳನ್ನು ರೂಪಿಸುತ್ತಿದೆ. ಹೀಗಿದ್ದರೂ ಬಂಗಾಳದಲ್ಲಿ ಕೈಗಾರಿಕಾಭಿವೃದ್ಧಿಯಾಗುತ್ತಿರುವುದು ಟಾಟಾ ಅವರಿಗೆ ತಿಳಿಯುತ್ತಿಲ್ಲವೇ ಎಂದು ಮಿತ್ರ ಪ್ರಶ್ನಿಸಿದ್ದಾರೆ.
ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮದಲ್ಲಿ ರತನ್ ಟಾಟಾ ಅವರು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು. ದೇಶದ ಆರ್ಥಿಕತೆಯನ್ನು ಬಲಪಡಿಸಲು ಮೋದಿಗೆ ಸಮಯಾವಕಾಶ ನೀಡಬೇಕು, ಆರ್ಥಿಕ ಪುನಶ್ಚೇತನ ಎನ್.ಡಿ.ಎ ಸರ್ಕಾರಕ್ಕೆ ಸವಾಲಾಗಿದ್ದರೂ ಮೋದಿ ಅದನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ ಎಂದು ಟಾಟಾ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದೇ ವೇಳೆ ಪಶ್ಚಿಮ ಬಂಗಾಳದಿಂದ ಟಾಟಾ ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಿಂದ ಸ್ಥಳಾಂತರಿಸಬೇಕಾದ ಸಂದರ್ಭದ ಎದುರಾದಾಗ ಗುಜರಾತ್ ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ನ ಸಾನಂದ್ ನಲ್ಲಿ ನನಗೆ ಹೊಸ ನೆಲೆ ನೀಡಿದ್ದರು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾಭಿವೃದ್ಧಿಯಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.