ಬೆಂಗಳೂರು : 2011ರ ಕೆಪಿಎಸ್ ಸಿ ನೇಮಕಾತಿ ರದ್ದು ಮಾಡಿ ರಾಜ್ಯ ಸರ್ಕಾರ ದೊಡ್ಡ ಪ್ರಮಾದ ಮಾಡಿದೆ. ಸರ್ಕಾರದ ಈ ನಿರ್ಧಾರ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 2011ರ 362 ಅಭ್ಯರ್ಥಿಗಳ ಆಯ್ಕೆಯನ್ನು ರದ್ದು ಮಾಡಿ ಸರ್ಕಾರ ಘೋರ ಅನ್ಯಾಯ ಮಾಡಿದೆ. ಇಂತಹ ತಪ್ಪು ನಿರ್ಧಾರಗಳಿಂದ ತಮ್ಮ ನಿರ್ಧಾರ ಸರಿಯಿದೆ ಎಂದಾದರೂ ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸೊದರು.
ಹಳ್ಳಿಗಳಿಂದ ಬಂದ, ಬಡ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದಾರೆ. ಈಗ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರ ಏಕಾ ಏಕಿ ರದ್ದು ಮಾಡಿರುವುದು ಸರಿಯಲ್ಲ. ಕಾಣದ ಕೈಗಳ ಶಕ್ತಿಗಳಿಗೆ ಸರ್ಕಾರ ಮಣಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2011ಕ್ಕಿಂತ ಮೊದಲೂ ಕೆಪಿಎಸ್ ಸಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾದರೆ ಈ ಹಿಂದಿನ ನೇಮಕಾತಿಯನ್ನೂ ರದ್ದು ಮಾಡಬೇಕು. ಕೆಪಿಎಸ್ ಸಿ ಒಂದು ಸ್ವಾಯತ್ತ ಸಂಸ್ಥೆ ಎಂಬುದನ್ನು ಸರ್ಕಾರ ಮರೆತಂತಿದೆ. ತನ್ನದಲ್ಲದ ವ್ಯಾಪ್ತಿಯಲ್ಲಿ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಕೆಪಿಎಸ್ ಸಿ ಇತಿಹಾಸದಲ್ಲಿಯೇ ಇಂತಹ ಕೆಟ್ಟ ನಿರ್ಧಾರ ಕೈಗೊಂಡಿರಲಿಲ್ಲ, ಯಾವ ಸರ್ಕಾರವೂ ಇದೂವರೆಗೂ ಈ ರೀತಿ ಮಾಡಿರಲಿಲ್ಲ. ಸರ್ಕಾರ ಭ್ರಷ್ಟಾಚಾರ ತಡೆಯಲೆಂದು ಈ ನಿರ್ಧಾರ ಕೈಗೊಂಡಿಲ್ಲ, ಯಾರದೋ ಹಿತ ಕಾಯಲು ಸರ್ಕಾರ ನೇಮಕಾತಿಯನ್ನೇ ರದ್ದು ಮಾಡಿದೆ. ಸಿದ್ದರಾಮಯ್ಯನವರ ಕೀಳುಮಟ್ಟದ ಅಭಿರುಚಿ, ಸಂಕುಚಿತ ಮನೋಭಾವನೆಗಳಿಂದ ಇಂತಹ ತಪ್ಪು ನಿರ್ಧಾರಗಳನ್ನು ಕೈಗೊಂಡು, ಹಲವು ಅಭ್ಯರ್ಥಿಗಳ ಕುಟುಂಬವನ್ನು ಬೀದಿಪಾಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಒಬ್ಬರು ಇಬ್ಬರು ಮಾಡಿದ ತಪ್ಪಿಗೆ ಎಲ್ಲರಿಗೂ ಅನ್ಯಾಯ ಮಾಡುವುದು ಸರ್ಕಾರದ ಯಾವ ನ್ಯಾಯವಿದು. ಸರ್ಕಾರದಲ್ಲಿರುವವರೆಲ್ಲರೂ ನಾನು ನೋಡದಂತಹ ಸತ್ಯಹರಿಶ್ಚಂದ್ರರೇ? ಎಂದು ಪ್ರಶ್ನಿಸಿದ್ದಾರೆ.