ಬೆಂಗಳೂರು : 2011ರ ಗೆಜೆಟೆಡ್ ಪ್ರೊಬೇಷನರಿ (ಕೆಪಿಎಸ್ ಸಿ) ನೇಮಕಾತಿಯನ್ನು ರದ್ದು ಪಡಿಸಿ ರಾಜ್ಯ ಸಚಿವ ಸಂಪುಟ ಸಭೆ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2011ನೇ ಸಾಲಿನ ಕೆಪಿಎಸ್ ಸಿ ನೇಮಕಾತಿಯನ್ನು ರದ್ದುಪಡಿಸಲು ನಿರ್ಧಾರ ಕೈಗೊಳ್ಳಲಾಯಿತು.
2011ರ ಕೆಪಿಎಸ್ ಸಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಿಐಡಿ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ 2011ನೇ ಸಾಲಿನಲ್ಲಿ ಆಯ್ಕೆಯಾದ 362 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಸರ್ಕಾರ ಆದೇಶ ನಿಡಿದೆ.
ಅಲ್ಲದೇ 2011ನೇ ಸಾಲಿನಲ್ಲಿ ಅರ್ಜಿ ಹಾಕಿದ್ದ ಎಲ್ಲರಿಗೂ ಮರುಪರೀಕ್ಷೆ ನಡೆಸಲು ಸಂಪುಟ ಸಭೆ ಸೂಚಿಸಿದೆ. ಸರ್ಕಾರದ ಈ ನಿರ್ಧಾರದಿಂದ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಭ್ಯರ್ಥಿಗಳ ಪರ ವಕೀಲ ದ್ವಾರಕಾನಾಥ್, ಸರ್ಕಾರದ ಆದೇಶ ಅಮಾನವೀಯವಾದದ್ದು, 362 ಅಭ್ಯರ್ಥಿಗಳಲ್ಲಿ ಯಾರೋ 7 ಅಭ್ಯರ್ಥಿಗಳು ತಪ್ಪು ಮಾಡಿರಬಹುದು. ತಪ್ಪು ಮಾಡಿದವರ ಬಗ್ಗೆ ಸಿಐಡಿ ತನಿಖೆಯನ್ನು ಮುಂದುವರೆಸಿ ಕ್ರಮ ಕೈಗೊಳ್ಳಲಿ. ಆದರೆ ಸರ್ಕಾರ ನೇಮಕಾತಿಯನ್ನೇ ರದ್ದುಮಾಡಿ ಪ್ರಾಮಾಣಿಕ ಬಡ ವಿದ್ಯಾರ್ಥಿಗಳ ವಿರುದ್ಧ ಆದೇಶ ಹೊರಡಿಸುವುದು ಸರಿಯಲ್ಲ ಎಂದು ತಿಳಿಸಿದರು.
2011ರ ಸಾಲಿನಲ್ಲಿ ಕೆಪಿಎಸ್ ಸಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹಲವು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದು, ಪ್ರತಿದಿನ ಕಣ್ಣೀರಿಡುತ್ತಿದ್ದಾರೆ. ಹಲವುಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಅಭ್ಯರ್ಥಿಗಳ ಸಮಸ್ಯೆಯನ್ನು ಆಲಿಸುವ ಸೌಜನ್ಯವನ್ನು ಕೂಡ ಮುಖ್ಯಮಂತ್ರಿಗಳು ಮಾಡದಿರುವುದು ವಿಪರ್ಯಾಸ. ಸರ್ಕಾರದ ತಪ್ಪು ಆದೇಶದಿಂದ ಪ್ರಾಮಾಣಿಕ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದೇವೆ. ನಮ್ಮ ಜೀವನವೇ ಹಾಳಾಗುತ್ತಿದೆ ಎಂದು ಎಂದು ಅಭ್ಯರ್ಥಿಗಳು ಕಣ್ಣೀರಿಡುತ್ತಿದ್ದಾರೆ. ಸರ್ಕಾರದಲ್ಲಿ ಯಾರೋ ಒಬ್ಬ ಭ್ರಷ್ಟ ಸಚಿವರಿದ್ದಾರೆ ಎಂದು ಕೇಳಿಬಂದರೆ, ಎಲ್ಲರೂ ರಾಜೀನಾಮೆ ನೀಡಿ, ಮರು ಚುನಾವಣೆ ಎದುರಿಸುತ್ತಾರೆಯೇ ಎಂಬುದು ಅಭ್ಯರ್ಥಿಗಳ ಪ್ರಶ್ನೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ನೀಡಲಿ. ತಪ್ಪು ಮಾಡದ ನಮ್ಮ ಮೇಲೆ ಯಾಕಿ ಶಿಕ್ಷೆ. ಇದು ಸರ್ಕಾರ ನಡೆಸುತ್ತಿರುವ ದೌರ್ಜನ್ಯ ಎಂದು ಕಿಡಿಕಾರಿದ್ದಾರೆ.