ರಾಘವೇಶ್ವರಭಾರತೀ ಶ್ರೀಗಳನ್ನು ಹೋಲುವ ನಕಲಿ ವೇಷಧಾರಿ
ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಚಾರಿತ್ರ್ಯಹರಣ ಮಾಡುವ ಉದ್ದೇಶದಿಂದ ಹೆಣೆದಿದ್ದ ನಕಲಿ ಸಿಡಿ ಪ್ರಕರಣಕ್ಕೆ ಏಕಾಏಕಿ ತೆರೆಬಿದ್ದಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಕೊನೆಯ ಹಂತದಲ್ಲಿದ್ದು ಆರೋಪಿಗಳಿಗೆ ಶಿಕ್ಷೆಯಾಗುವ ಸಮಯ ಸನ್ನಿಹಿತವಾಗುವ ಹಂತದಲ್ಲಿ ಸರಕಾರ ಕೇಸನ್ನೇ ವಾಪಸ್ ಪಡೆಯಲು ಆತುರದ ನಿರ್ಧಾರ ತೆಗೆದುಕೊಂಡಿರುವುದು ತೀವ್ರ ವಿವಾದವನ್ನು ಸೃಷ್ಠಿಸಿದೆ. ಮಾತ್ರವಲ್ಲ, ಈ ನಿರ್ಧಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಗುಮಾನಿಗೂ ಪುಷ್ಠಿ ಕೊಟ್ಟಿದೆ.
ಷಡ್ಯಂತ್ರದ ಮೂಲಬೇರುಗಳು ಗೋಕರ್ಣದಲ್ಲಿ ಚಾಚಿದೆ ಎಂಬುದು ಹಳೆಯ ವಿಚಾರ. ಆದರೆ ನ್ಯಾಯಾಲಯದಲ್ಲಿ ಸೆಣಸಿ ವಿಫಲರಾದ ನಕಲೀ ಸೀಡಿ ಪ್ರಕರಣದ ರುವಾರಿಗಳು, ಸರ್ಕಾರದ ಮೇಲೂ ಕೂಡ ಪ್ರಭಾವ ಬೀರಬಲ್ಲರು ಎಂಬುದಕ್ಕೆ, ನಕಲೀ ಸೀಡಿ ಪ್ರಕರಣದ ಕೇಸ್ ಹಿಂತೆಗೆದುಕೊಂಡಿರುವುದೇ ಸಾಕ್ಷಿ.
ಪ್ರಾಯಶಃ ಇದೇ ಮೊದಲಿರಬೇಕು, ಯಾವ ಸಾಮಾಜಿಕ ನ್ಯಾಯದ ಉದ್ದೇಶವೂ ಇಲ್ಲದೆ, ಸಮರ್ಪಕ ಸಾಕ್ಷ್ಯಗಳು ಇರುವ ಕ್ರಿಮಿನಲ್ ಪ್ರಕರಣವನ್ನು ಸರ್ಕಾರ ಹಿಂತೆಗೆದುಕೊಂಡದ್ದು. ಇದರಿಂದ ಯಾವ ಆರೋಪಿಯು ಕೂಡ ತನ್ನ ಪ್ರಭಾವ ಬಳಸಿಕೊಂಡು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದೆಂಬ ಕೆಟ್ಟ ಸಂದೇಶವನ್ನು ಕರ್ನಾಟಕದ ಜನತೆಗೆ ರವಾನಿಸಿದಂತಾಗುವುದಲ್ಲವೇ...?
ಒಂದು ಬಾರಿಯಲ್ಲ, ಒಟ್ಟು ಒಂಬತ್ತು ಬಾರಿ ನಕಲೀ ಸೀಡಿ ಅರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದಲ್ಲಿ ಮಾಡಿದ ಹೋರಾಟ ವಿಫಲವಾಗಿ ಅಂತಿಮವಾಗಿ ಸರ್ಕಾರದ ಮೇಲೆಯೇ ಕಬಂಧ ಬಾಹು ಚಾಚಿ, ಪ್ರಭಾವ ಬೀರಿದ್ದಾರೆ ಎಂದರೆ ಇದರ ಹಿಂದೆ ಅತ್ಯಂತ ಪ್ರಭಾವೀ ವ್ಯಕ್ತಿಗಳು, ಶಕ್ತಿಗಳು ಇವೆ ಎನ್ನುವುದಕ್ಕೆ ಬೇರೆ ಪುರಾವೆ ಬೇಕೆ? ಹಾಗಿರುವಾಗ, ಸ್ವಾಮೀಜಿಯವರ ಮೇಲೆ ಒಂದು 'ಮಿಥ್ಯಾಚಾರ' ಆರೋಪ ಹೇರುವುದು ಕಷ್ಟದ ಕೆಲಸವೇ....?
ಗೋಪಾಲ್ ಬಿ ಹೊಸೂರ್ ಅವರ ಮಾರ್ಗದರ್ಶನದಲ್ಲಿ ದಕ್ಷ ಪೋಲೀಸ್ ಅಧಿಕಾರಿಗಳು ರಾತ್ರೋರಾತ್ರಿ ಆರೋಪಿಗಳ ಮನೆ ಮೇಲೆ ದಾಳಿಮಾಡಿ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಪ್ಟವೇರ್ ಹಾಗೂ ನೂರಾರು ಮಾರ್ಪಡ್ ಪೋಟೋಗಳು ಹಾಗೂ ನಕಲೀ ವಿಡಿಯೋಗಳ ವಶಪಡಿಸಿಕೊಂಡು ಕೆಲ ಅರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಗದಷ್ಟು ಸಾಕ್ಷ್ಯಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಸಮರ್ಪಿಸಿದ್ದರು. ಈಗ ಆ ಪೋಲೀಸರ ದಕ್ಷತೆ, ಕರ್ತವ್ಯ ನಿಷ್ಠೆ ಎಲ್ಲವೂ ನೀರುಪಾಲಾದಂತಾಗಿದೆ.
ಏಕಾಏಕಿ ಸರ್ಕಾರ ಮಾಧ್ಯಮಗಳಿಗೂ ಅರಿವಿಗೆ ಬರದಂತೆ ಕೇಸನ್ನು ಹಿಂಪಡೆದಿದೆ. ಹಿಂಪಡೆಯಲು ಯಾವ ಸಕಾರಣವೂ ಇಲ್ಲ. ಅಂದರೆ, ಇದು ಸಂವಿಧಾನ ಕೊಡಮಾಡಿದ ಸಾಮಾಜಿಕ ನ್ಯಾಯದ ಕಗ್ಗೊಲೆಯಲ್ಲದೇ ಇನ್ನೇನು....? ಹಲವು ನ್ಯಾಯಾಧೀಶರು ನೀಡಿದ ತೀರ್ಪು ಕೂಡ ಈ ಅರೋಪಿಗಳ ವಿರುದ್ದವಾಗಿದೆ. ಇಂತಹ ಸನ್ನಿವೇಶದಲ್ಲಿ ಕೇಸ್ ವಾಪಾಸಾತಿ ಮಾಡಿದರೆ ಆರೋಪಿಗಳ ರಕ್ಷಣೆ ಮಾಡಿದಂತಾಗಿಲ್ಲವೇ? ಕೇಸ್ ಮೆರಿಟ್ಸ್ ಆಧಾರದ ಮೇಲೆ ಎರಡೆರಡು ಬಾರಿ ಆರೋಪಿಗಳ ಅರ್ಜಿ ಹೈಕೋರ್ಟ್ನಲ್ಲಿ ತಿರಸ್ಕ್ರತವಾದರೂ, ಸರ್ಕಾರ ಅಂತಹ ಕೇಸನ್ನು ಕೂಡ ವಾಪಾಸ್ ಪಡೆಯುತ್ತದೆ ಎಂದಾದರೆ, ಸರ್ಕಾರದ ಮೇಲೆ ಅದೆಂತಹ ಪ್ರಭಾವ ಬೀರಿರಬೇಕು....?
ಕರ್ನಾಟಕದ ಇತಿಹಾಸದಲ್ಲೇ ಸಮರ್ಪಕ ಸಾಕ್ಷ್ಯಗಳು ಇರುವ ಇಂತಹ ಪ್ರಕರಣ ಹಿಂತೆಗೆದುಕೊಂಡಿರುವುದು ಎಲ್ಲೂ ಕಾಣದು. ಆದರೆ ಈ ಮೂಲಕ ವಾಮಮಾರ್ಗದ ಮೂಲಕ ಆರೋಪಿಗಳು ಕಾನೂನು ಕುಣಿಕೆಯಿಂದ ಬಚಾವಾಗಬಹುದು ಎಂಬ ಸಂದೇಶ ನೀಡಿದಂತಾಗಿಲ್ಲವೇ...? ಈ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಗೆ ಅಪಚಾರವೆಸೆಗಿದಂತೆ ಅಲ್ಲವೇ...?
ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದವರು, ಅಧಿಕಾರದ ದುರುಪಯೋಗ ಮಾಡಿ ನ್ಯಾಯದ ಹಾದಿಯನ್ನು ತಪ್ಪಿಸುವ ಕೆಟ್ಟ ಸಂಸ್ಕ್ರತಿ ಇಂದಿಗೇ ಕೊನೆಯಾಗಲಿ, ನ್ಯಾಯ ಗೆಲ್ಲಲಿ.