ಮಾನವನನ್ನು ಜಡತ್ವದಿಂದ ಜಾಗೃತಗೊಳಿಸುವ ಶಿವರಾತ್ರಿಯ ಜಾಗರಣೆ
ರಾತ್ರಿ ಎಂದರೆ ತಮೋ ಗುಣದ ಪ್ರತೀಕ. ಆಲಸ್ಯ ಆಲಸ್ಯ, ನಿದ್ರೆ, ಅಜ್ಞಾನಗಳ ದ್ಯೋತಕವಾದ ರಾತ್ರಿಯಲ್ಲಿ ಜಾಗೃತರಾಗಿದ್ದುಕೊಂಡು ಸದಾ ಜಾಗೃತನಾಗಿರುವ ಸದಾಶಿವನನ್ನು ಸ್ಮರಿಸುವ ಮಹಾ ರಾತ್ರಿ ಮತ್ತೆ ಬಂದಿದೆ. ಶಿವರಾತ್ರಿ ಆಸ್ತಿಕಜನರಲ್ಲಿನ ಭಕ್ತಿ ಭಾವಗಳನ್ನು ಜಾಗೃತಗೊಳಿಸಿದೆ.
ಮಹಾ ಶಿವರಾತ್ರಿಯ ಜಾಗರಣೆ ಕೇವಲ ನಿದ್ದೆಗೆಡುವುದಕ್ಕೆ ಮಾತ್ರ ಸೀಮಿತವಲ್ಲ ಅದು ಉಪವಾಸ, ಧ್ಯಾನದ ಸಂಗಮ. ಶಿವರಾತ್ರಿ ಎಂದರೆ ಉಳಿದ ಹಬ್ಬಗಳಂತೆ ಅಲ್ಲಿ ಹೊಸ ಉಡುಪು ತೊಡುವ ಹಬ್ಬಗಳಂತೆ ಪ್ರಾಪಂಚಿಕ ಆಡಂಭರವಿರುವುದಿಲ್ಲ. ಇದ್ದರೂ ಅದನ್ನು ಮಹಾ ಪರಿವರ್ತನೆಯ ಅಧ್ಯಾತ್ಮಿಕ ಆಡಂಭರವೆನ್ನಬಹುದು.
ಧಾರ್ಮಿಕ ಕೈಂಕರ್ಯಗಳಿದ್ದರೂ ಈ ಶಿವರಾತ್ರಿ ಗಮನ ಸೆಳೆಯುವುದೇ ಜಾಗರಣೆಯ ಉದ್ದೇಶದಿಂದ. ಜಾಗರಣೆಯ ಉದ್ದೇಶದ ಹಿಂದೆ ಸ್ವಾರಸ್ಯಕರವಾದ ಕಥೆಗಳಿವೆ.
ದೇವದಾನವರು ಅಮೃತ ಪಡೆಯಲು ಕ್ಷೀರಸಾಗರ ಮಥನಕ್ಕೆ ಮುಂದಾದಾಗ ಮೊದಲು ವಿಷ ಉದ್ಭವಿಸಿತು ಕ್ಷೀರ ಸಾಗರವನ್ನು ಹಾಲಾಹಲ ವ್ಯಾಪಿಸಿತು. ಶಿವನು ತನ್ನ ಅಂಗೈಯಲ್ಲಿ ವಿಷವನ್ನು ಶೇಖರಿಸಿ ಕುಡಿದನು. ಅಲ್ಲಿಂದ ಶಿವನಿಗೆ ವಿಷಕಂಠ ಎಂಬ ಹೆಸರೂ ಬಂದಿತು. ಶಿವ ವಿಷವನ್ನು ಕುಡಿದ ದಿನವನ್ನೇ ಮಾಘ ಕೃಷ್ಣ ಚತುರ್ದಶಿ ಎಂದು ಹೇಳಲಾಗುತ್ತದೆ. ಇನ್ನು ನಮ್ಮ ಪೂರ್ವಜರು ಶಿವರಾತ್ರಿಯಂದು ಜಾಗರಣೆ ಆಚರಿಸುವಂತೆ ಮಾಡಿರುವುದಕ್ಕೆ ವೈಜ್ನಾನಿಕ ಕಾರಣವೂ ಇದೆ. ವಿಷವನ್ನು ಕುಡಿದರೆ ಅಥವಾ ವಿಷ ಜಂತುಗಳು ಕಚ್ಚಿದರೆ ಇಂದಿಗೂ ಆ ವ್ಯಕ್ತಿಯನ್ನು 24 ಗಂಟೆಗಳ ಕಾಲ ನಿದ್ರೆಗೆ ಜಾರುವುದಕ್ಕೆ ಬಿಡುವುದಿಲ್ಲ. ವಿಷ ದೇಹದಾದ್ಯಂತ ವ್ಯಾಪಿಸಬಾರದು ಎಂಬುದು ಇದರ ಹಿಂದಿರುವ ಉದ್ದೇಶ. ಒಂದು ವೇಳೆ ವಿಷ ರೋಗಿಯ ದೇಹವನ್ನು ವ್ಯಾಪಿಸಿದರೆ ರೋಗಿಯ ಸ್ಥಿತಿ ಚಿಂತಾಜನಕ ಆಗುತ್ತದೆ. ವಿಷ ಶರೀರದಲ್ಲಿ ತಾಪ ಹೆಚ್ಚು ಮಾಡುವುದರಿಂದ ತಾಪವನ್ನು ಶಮನ ಮಾಡುವುದಕ್ಕಾಗಿ ಎಳನೀರು, ಹಣ್ಣುಗಳು, ಪಾನಕ ಕೊಡುತ್ತಾರೆ. ಶಿವರಾತ್ರಿಯ ದಿನದಂದೂ ಸಹ ಶಿವನ ಲಿಂಗಕ್ಕೆ 24 ಗಂಟೆಗಳೂ ಎಳನೀರು, ನೀರು ಕ್ಷೀರದಿಂದ ಅಭಿಷೇಕ ಮಾಡಲಾಗುತ್ತದೆ.
ಶಿವನಿಗೂ ಶಿವರಾತ್ರಿ ಅತ್ಯಂತ ಪ್ರಿಯ ದಿನ. ಶಿವರಾತ್ರಿಯಂದು ಉಪವಾಸವಿದ್ದು ಜಾಗರಣೆ ಮಾಡಿ ತನ್ನನ್ನು ಪೂಜಿಸುವ ಭಕ್ತರಿಗೆ ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಹೇಳಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.
ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಇಷ್ಟೆಲ್ಲಾ ಧಾರ್ಮಿಕ ಹಿನ್ನೆಲೆಯುಳ್ಳ ಶಿವರಾತ್ರಿಯನ್ನು ಭಕ್ತಿಭಾವಗಳಿಂದ ಆಚರಿಸಲಾಗುತ್ತದೆ. ಮಹಾಶಿವರಾತ್ರಿಯಂದು ಎಲ್ಲರೂ ಶಿವನನ್ನು ಆರಾಧಿಸೋಣ, ಶಿವನ ಕೃಪೆಗೆ ಪಾತ್ರರಾಗೋಣ.