.
|| ಹರೇ ರಾಮ ||
ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ..ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ..ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು..ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು…ಬೆಳಗಿನ ಹೊತ್ತು ಬೆಳಕು ಬಿಸಿಲುಗಳು ತನ್ನ ಮೇಲೆ ಬಿದ್ದೊಡನೆ, ತಾನಾಗಿ ತೆರೆದುಕೊಳ್ಳುವ ಕಣ್ಣುಗಳು.. ಸೂರ್ಯನ ಮುಖನೋಡಿದೊಡನೆ ಅರಳುವ ಕಮಲ..ಪೂರ್ವದಿಂದ ಪಶ್ಚಿಮದವರೆಗೆ ನೇಸರ ಸಾಗಿದಂತೆಯೇ ಆ ಕಡೆಯೇ ಮುಖ ತಿರುಗಿಸುವ, ಅನವರತ ಸೂರ್ಯನನ್ನು ದಿಟ್ಟಿಸುತ್ತಲೇ ಇರುವ ಸೂರ್ಯಕಾಂತಿ..ಜೀವಲೋಕಕ್ಕೆ ಅದೇಕೆ ಈ ಬಗೆಯ ಬೆಳಕಿನ ಸೆಳೆತ..!?
ಏಕೆಂದರೆ.. ಈ ಜಗದ ಮೂಲ – ಬೆಳಕು. ಪ್ರತಿಯೊಂದು ಜೀವದ ಮೂಲವೇ ಬೆಳಕು. ಜೀವಿ ತನ್ನನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸಲಾರ. ತಾನು ಎಂದರೆ ಬೆಳಕೇ ತಾನೇ . .! ಒಳಗೆಲ್ಲೋ ಕಳೆದು ಹೋದ ನಾನೆಂಬ ಬೆಳಕನ್ನು ಜೀವಲೋಕ ಹೊರಗೆ ಹುಡುಕುವ ಪರಿ ಇದು!! ಹೊರಜಗದಲ್ಲಿ ಕಾಣ ಸಿಗುವ ಬೆಳಕುಗಳೆಲ್ಲ ನಮ್ಮೊಳಗೆ ಸ್ವತಃ ಬೆಳಗುವ 'ನಾನು' ಎಂಬ ಬೆಳಕಿನ ಪ್ರತಿಬಿಂಬಗಳು..ಮರೆತು ಹೋದ – ಮರೆಯಾದ ಆತ್ಮ ಜ್ಯೋತಿಯನ್ನು ನೆನಪಿಸಲು ಎಲ್ಲೆಲ್ಲೂ ಭಗವಂತನಿಟ್ಟ ಸ್ಮಾರಿಕೆಗಳು..! ಬೆಳಕಿನ ಮೇಲಣ ಪ್ರೀತಿಯೇ ಭಾ-ರತಿ. (ಭಾ – ಬೆಳಕು, ರತಿ- ಅದರಲ್ಲಿ ಆಸಕ್ತಿ, ಆನಂದ) ಬೆಳಕನ್ನು ಪ್ರೀತಿಸುವವರು ಭಾ-ರತರು. ಅಂತವರ ನಾಡು ಭಾರತ!
ಉತ್ತಿಷ್ಠತ | ಮಾ ಸ್ವಪ್ತ ||
ಅಗ್ನಿಮಿಚ್ಛಧ್ವಂ ಭಾರತಾಃ ||
(ಭಾರತರೇ! ಎದ್ದೇಳಿ! ನಿದ್ರಿಸಬೇಡಿ! ನಿಮ್ಮೊಳಗೆ ಸದಾ ಬೆಳಗುವ ಅಗ್ನಿಯನ್ನು ಗುರುತಿಸಿ ಬಯಸಿ - ಋಷಿ ವಾಣಿ) ಭಾರತೀಯರು 'ಭಾರತ'ರಾದರೆ… ವಿಶ್ವವೇ ಭಾರತವಾದೀತು!!
ಭಾರತೀಯರು ಬೆಳಕನ್ನು ಮರೆತರೆ…? ಭಾರತ… ಭೀ-ರತವಾದೀತು! (ಭೀ ಅಂದರೆ ಭಯ ಎಂದರ್ಥ) ನಿತ್ಯ ದೀಪೋತ್ಸವದ ಈ ಕಾರ್ತಿಕ ಮಾಸ ಬೆಳಕನ್ನು ಪ್ರೀತಿಸಲು ಆರಂಬಿಸುವುದಕ್ಕೆ ಶುಭ ಸಮಯವಲ್ಲವೇ…?
|| ತಮಸೋಮಾ ಜ್ಯೋತಿರ್ಗಮಯ ||
ಕೃಪೆ - ಹರೇರಾಮ ಡಾಟ್ ಇನ್