ಅಹಮದಾಬಾದ್ : ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಆಯ್ಕೆಯಾಗಿದ್ದು, ನಿತಿನ್ ಪಟೇಲ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ರೂಪಾನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡ ಲಾಯಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ವೀಕ್ಷಕರಾಗಿ ಉಪಸ್ಥಿತರಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ರೂಪಾನಿ, ಆನಂದಿಬೆನ್ ಪಟೇಲ್ ಸರ್ಕಾರದಲ್ಲಿ ಸಾರಿಗೆ, ನೀರು ಸರಬರಾಜು, ಕಾರ್ವಿುಕ ಹಾಗೂ ಉದ್ಯೋಗ ಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ವಜುಭಾಯಿ ವಾಲಾ ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರಿಂದ ತೆರವಾದ ರಾಜ್ಕೋಟ್ ಪಶ್ಚಿಮ ಕ್ಷೇತ್ರದಿಂದ 2014ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ರೂಪಾನಿ ಆಯ್ಕೆಯಾಗಿದ್ದರು.
ಮುಖ್ಯಮಂತ್ರಿ ಹುದ್ದೆಯ ಮುಂಚೂಣಿಯಲ್ಲಿದ್ದ ನಿತಿನ್ ಪಟೇಲ್, ಪಕ್ಷದ ಎಲ್ಲ ಶಾಸಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪ್ರಕಟಿಸಿದ್ದರು. ನಿತಿನ್ ಪಟೇಲ್ ಅವರೇ ಗುಜರಾತ್ ನ ನೂತನ ಸಿಎಂ ಎಂದು ಹೇಳಲಾಗಿತ್ತು. ಇನ್ನೇನು ಘೋಷಣೆಯೊಂದೇ ಬಾಕಿ ಎಂಬ ಖುಷಿಯಲ್ಲಿದ್ದರು. ಆದರೆ ಕೊನೆಗಳಿಗೆಯಲ್ಲಿ ಅಮಿತ್ ಷಾ ಉರುಳಿಸಿದ ದಾಳದಿಂದ ವಿಜಯ್ ರೂಪಾನಿ ಗುಜರಾತ್ ಸಿಎಂ ಆಗಿ ಆಯ್ಕೆಯಾದರು. ನಿತಿನ್ ಪಟೇಲ್ ಕೇವಲ ಡಿಸಿಎಂ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ವಿಜಯ ರೂಪಾನಿ ಸೌರಾಷ್ಟ್ರದ ಜನನಾಯಕ. ರಾಜಕೋಟ್ನಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಸಾಮಾನ್ಯ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ರೂಪಾನಿ ಜನ ಸಂಘದ ಕಾರ್ಯಕರ್ತರಾಗಿ ಮುಂದೆ ಬಿಜೆಪಿ ಪ್ರವೇಶಿಸಿದರು. ಅಲ್ಲೂ ಬೇರುಮಟ್ಟದಿಂದ ಕೆಲಸ ಮಾಡುತ್ತ ಜನರ ವಿಶ್ವಾಸ ಸಂಪಾದಿಸಿದ ಅವರಿಗೆ ರಾಜಕೀಯ ಪದನ್ನೋತಿಗಳೂ ಲಭಿಸಿದವು. 1956ರ ಆಗಸ್ಟ್ 2ರಂದು ಮ್ಯಾನ್ಮಾರ್ನ ರಂಗೂನ್ನಲ್ಲಿ ಜನಿಸಿದ ರೂಪಾನಿ ಬಿ.ಎ.ಎಲ್.ಎಲ್.ಬಿ ಪದವೀಧರರು. ಜೈನ (ಬನಿಯಾ) ಸಮುದಾಯದ ಇವರು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಎಬಿವಿಪಿ ಸಂಪರ್ಕಕ್ಕೆ ಬಂದು ಆರ್ಎಸ್ಎಸ್ಗೂ ನಿಕಟವಾದರು. 2006ರಿಂದ 2012ರವರೆಗೆ ರಾಜ್ಯಸಭೆ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು. ರೂಪಾನಿಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ. ಆದರೆ, ಮೊದಲ ಪುತ್ರ ಪೂಜಿತ್ ಮೂರುವರೆ ವರ್ಷದ ಮಗುವಾಗಿದ್ದಾಗ ಮನೆಯ ಮೂರನೆ ಮಹಡಿಯಿಂದ ಬಿದ್ದು ಮೃತಪಟ್ಟಿದ್ದ. ಈ ಆಘಾತ ರೂಪಾಣಿಯವರನ್ನು ಬಹುಕಾಲ ಕಾಡಿತ್ತು. ಆ ನೋವಿನಿಂದ ಹೊರಬರಲು ಪೂಜಿತ್ ಹೆಸರಿನಲ್ಲಿ ರಾಜಕೋಟ್ನಲ್ಲಿ ಟ್ರಸ್ಟ್ ಸ್ಥಾಪಿಸಿರುವ ರೂಪಾನಿ ಬಡ ಮಕ್ಕಳಿಗೆ, ಪೌರ ಕಾರ್ವಿುಕರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುತ್ತಿದ್ದಾರೆ.
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಸೌರಾಷ್ಟ್ರ ಭಾಗದ ಪ್ರಭಾವಿ ಮುಖಂಡರಾಗಿರುವ ಬನಿಯಾ ಜೈನ ಸಮುದಾಯದ ರೂಪಾನಿ, ಪಟೇಲ್ ಮೀಸಲಾತಿ ಹೋರಾಟವನ್ನು ತಣ್ಣಗಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಒಂದೊಮ್ಮೆ ನಿತಿನ್ ಪಟೇಲ್ ಆಯ್ಕೆ ಮಾಡಿದ್ದರೆ ಸೌರಭ್ ಪಟೇಲ್ ಮುನಿಸಿಕೊಳ್ಳುವ ಸಾಧ್ಯತೆಯಿತ್ತು. ಇದರಿಂದ ಪಟೇಲ್ ಸಮುದಾಯದ ನಾಯಕರಲ್ಲೇ ಗುಂಪುಗಾರಿಕೆ ಸೃಷ್ಟಿಯಾಗುವ ಆತಂಕ ಹೊಂದಿದ್ದ ಬಿಜೆಪಿ, ಸಂಘ ನಿಷ್ಠ ರೂಪಾನಿಗೆ ಜವಾಬ್ದಾರಿ ಹೊರಿಸಿದೆ. ಆ ಮೂಲಕ ಪಟೇಲ್- ದಲಿತ ಸಮುದಾಯದ ಹೊರತಾಗಿ ತಟಸ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಚುನಾವಣೆ ಗೆಲ್ಲುವ ತಂತ್ರ ಹೆಣೆದಿದೆ.