ಲಕ್ನೌ : ಬಿಎಸ್ ಪಿ ನಾಯಕಿ ಮಾಯಾವತಿಯವರನ್ನು ವಿವಾದಾತ್ಮಕವಾಗಿ ಹೋಲಿಕೆ ಮಾಡಿದ್ದ ಉತ್ತರ ಪ್ರದೇಶದ ಬಿಜೆಪಿ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ರನ್ನು ವಜಾಗೊಳಿಸಲಾಗಿದೆ.
ದಯಾಶಂಕರ ಸಿಂಗ್ ಹೇಳಿಕೆ ಸಂಸತ್ ಉಭಯ ಸದನಗಳಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದೆ. ದಯಾಶಂಕರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಹೇಳಿದೆ.
ಇನ್ನೊಂದೆಡೆ ದಯಾಶಂಕರ್ ಸಿಂಗ್ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವೈಯಕ್ತಿಕವಾಗಿ ವಿಷಾದ ಕೋರಿದ್ದಾರೆ.
ಇಂತಹ ಹೇಳಿಕೆಗಳು ಸರಿಯಾದುದಲ್ಲ. ಅವರು ಬಳಸಿದ ಶಬ್ದವನ್ನು ಖಂಡಿಸುತ್ತೇನೆ. ಅವರು ಯಾಕೆ ಹೀಗೆ ಹೇಳಿದರು ಎಂದು ನಾವು ತನಿಖೆ ಮಾಡುತ್ತೇವೆ. ವೈಯಕ್ತಿಕವಾಗಿ ನಾನು ವಿಷಾದ ಹೇಳುತ್ತೇನೆ. ನಿಮ್ಮ ಗೌರವಕ್ಕೆ ನಾವು ಬೆಲೆ ನೀಡುತ್ತಿದ್ದು, ನಿಮ್ಮ ಜೊತೆ ಇರುತ್ತೇವೆ ಎಂದು ರಾಜ್ಯಸಭೆಯಲ್ಲಿ ಮಾಯಾವತಿಯವರತ್ತ ನೋಡಿ ಜೇಟ್ಲಿ ಹೇಳಿದ್ದಾರೆ.
ಇನ್ನೊಂದೆಡೆ ದಯಾಶಂಕರ್ ಸಿಂಗ್ ಹೇಳಿಕೆಗೆ ಬಿಜೆಪಿ ಉತ್ತರ ಪ್ರದೇಶ ಘಟಕ ಕೂಡ ಕ್ಷಮೆ ಕೋರಿದೆ. ಮಾಯಾವತಿಯವರ ಬಗ್ಗೆ ಬಳಸಿರುವ ಭಾಷೆ ತುಂಬಾ ತಪ್ಪಾಗಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.