ಬೆಂಗಳೂರು : ಜುಲೈ 4ರಿಂದ ಜುಲೈ 23ರವರೆಗೆ ವಿಧಾನಸಭೆ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 4ರಿಂದ ಜುಲೈ 23ರವರೆಗೆ ಬೆಂಗಳೂರಿನಲ್ಲಿ ಮುಂಗಾರು ಅಧಿವೇಶನ ನಡೆಯಲಿದೆ ಎಂದರು.
ಅಕ್ರಮ ಪಡಿತರ ಚೀಟಿ ಹೊಂದಿರುವವರ ಬಗ್ಗೆ ಹಾಗೂ ಪಡಿತರ ದಾಸ್ತಾನುದಾರರ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ಯೋಜನೆಗೆ ಮತ್ತು ರಾಜ್ಯ ವಸತಿ ನೀತಿ-2015ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ 4ಟಿಎಂಸಿ ನೀರು ಬಳಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಲ್ಲದೆ 1021 ಕೋಟಿ ರೂಪಾಯಿ ವೆಚ್ಚದ ಕೆಂಪವಾಡ ಬಸವ ಏತ ನೀರಾವರಿ ಯೋಜನೆಗೂ ಸಂಪುಟ ಸಭೆ ಅನುಮತಿ ನೀಡಿದೆ ಎಂದು ತಿಳಿಸಿದರು.