ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ನಿರೀಕ್ಷೆಯಂತೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ, ಕೇರಳದಲ್ಲಿ ಎಡಪಕ್ಷ ಜಯಭೇರಿ ಬಾರಿಸಿದೆ. ತಮಿಳುನಾಡಿನಲ್ಲಿ ಚುನಾವಣೋತ್ತರ ಸಮೀಕ್ಷಾ ಭವಿಷ್ಯ ಸುಳ್ಳಾಗಿದೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ 133 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷ 212 ಸ್ಥಾನ ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದಲ್ಲದೆ, ದಾಖಲೆಯ ಗೆಲುವು ಸಾಧಿಸಿ ಮ್ಯಾಜಿಕ್ ನಂಬರ್ ದಾಟಿದ್ದಾರೆ. ಜನತೆ ಮತ್ತೊಮ್ಮೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಕೈ ಹಿಡಿದಿದ್ದು, ದೀದಿ ಮುಖ್ಯಂಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಇದು ಜನತೆಯ ಜಯವಾಗಿದೆ. ಬಂಗಾಳದಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ. ಆದ್ದರಿಂದ ಜನತೆ ಆಶಿರ್ವಾದ ಮಾಡಿದ್ದಾರೆ. ಮೇ 27ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಆರಂಭಿಕವಾಗಿ ಡಿಎಂಕೆ ಮುನ್ನಡೆ ಸಾಧಿಸಿತ್ತು. ಎಐಎಡಿಎಂಕೆ 2ನೇ ಸ್ಥಾನದಲ್ಲಿತ್ತು. ಕೆಲ ಹೊತ್ತಿನಲ್ಲೇ ಭಾರೀ ಪೈಪೋಟಿ ಮೂಲಕ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಭಾರೀ ಮುನ್ನಡೆ ಸಾಧಿಸಿತು.
ಜಯಲಲಿತಾ ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 16,000ಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡು ಗೆಲುವು ಸಾಧಿಸಿದ್ದಾರೆ.
ಅಸ್ಸಾಂನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದ್ದರೆ, ಬಿಜೆಪಿ 86 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಈ ಮೂಲಕ ಈಶಾನ್ಯ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಶಕೆ ಆರಂಭವಾದಂತಾಗಿದೆ. ಕೇರಳದಲ್ಲಿ ಎಲ್ ಡಿಎಫ್ 92 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಈ ಕೆಳಗಿನಂತಿದೆ.
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್-212 ಸ್ಥಾನಗಳು
ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆಗೆ -133 ಸ್ಥಾನಗಳು
ಅಸ್ಸಾಂನಲ್ಲಿ ಬಿಜೆಪಿ -86 ಸ್ಥಾನಗಳು
ಕೇರಳದಲ್ಲಿ ಎಲ್ ಡಿಎಫ್ - 92 ಸ್ಥಾನಗಳು
ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ -17 ಸ್ಥಾನಗಳು