ನವದೆಹಲಿ : ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು, ಮೂರು ರಾಜ್ಯಗಳಲ್ಲೂ ಮತದಾನ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದೆ.
ತಮಿಳುನಾಡಿನ 233, ಕೇರಳದ 140 ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮೂರೂ ರಾಜ್ಯಗಳಲ್ಲಿಯೂ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.
ಇದಕ್ಕೂ ಮೊದಲು ನಡೆದಿದ್ದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನ ಫಲಿತಾಂಶವನ್ನು ಈ ಮೂರು ರಾಜ್ಯಗಳೊಂದಿಗೆ ಸೇರಿಸಿ ಮೇ.19ರಂದು ಪ್ರಟಗೊಳಿಸಲಾಗುತ್ತದೆ.
ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂದು ಹೇಳಬಹುದು. ಅಣ್ಣಾಡಿಎಂಕೆಯ ಪರಮೋಚ್ಚ ನಾಯಕಿ ಹಾಗೂ ಮುಖ್ಯಮಂತ್ರಿ ಜಯಲಲಿತಾ ಅವರು ಅಮ್ಮಾ ಸರಣಿ ಕಾರ್ಯಕ್ರಮಗಳ ನೆರವಿನಿಂದ ಮತ್ತೂಮ್ಮೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಜಯಲಲಿತಾ ಅವರನ್ನು ಹವಣಿಸಲು ಕರುಣಾನಿಧಿ ನೇತೃತ್ವದ ಡಿಎಂಕೆ ಮೈತ್ರಿಕೂಟ ಯತ್ನಿಸುತ್ತಿದೆ. ಇದರ ಜತೆಗೆ ಕ್ಯಾಪ್ಟನ್ ವಿಜಯ್ ಕಾಂತ್ ಸಾರಥ್ಯದಲ್ಲಿ ಪೀಪಲ್ಸ್ ವೆಲ್ಫೇರ್ ಫ್ರಂಟ್, ರಾಮದಾಸ್ ನೇತೃತ್ವದ ಪಿಎಂಕೆ ಕೂಡ ಪೈಪೋಟಿ ಒಡ್ಡುತ್ತಿವೆ.
ಡಾ.ರಾಧಾಕೃಷ್ಣನ್ ನಗರದಿಂದ ಮುಖ್ಯಮಂತ್ರಿ ಜಯಲಲಿತಾ ಸೇರಿ 45 ಮಂದಿ ಕಣದಲ್ಲಿದ್ದಾರೆ. ಅತಿ ಹೆಚ್ಚು ಮಂದಿ ಸ್ಪರ್ಧಿಸಿರುವ ತಮಿಳುನಾಡಿನ ವಿಧಾನಸಭಾ ಕ್ಷೇತ್ರ ಇದಾಗಿದೆ. ಎಐಎಡಿಎಂಕೆ ಎಲ್ಲ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಜೆಪಿ 188, ಡಿಎಂಕೆ 180, ಬಿಎಸ್ಪಿ 158, ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹೂಡಿವೆ.
ಇನ್ನು ಕೇರಳದಲ್ಲಿ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಎಡರಂಗ ಸಾರಥ್ಯದ ಎಲ್ಡಿಎಫ್ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರ್ಕಾರದ ವಿರುದ್ಧದ ಹಗರಣಗಳನ್ನೇ ಎಲ್ಡಿಎಫ್ ನ ವಿ.ಎಸ್. ಅಚ್ಯುತಾನಂದನ್ ಅವರು ಪ್ರಮುಖವಾಗಿ ಪ್ರಸ್ತಾವಿಸಿದ್ದಾರೆ.
140 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 2.6 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಬಿಜೆಪಿಯೂ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದು 98 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ 87, ಸಿಪಿಎಂ 85, ಬಿಎಸ್ಪಿ 74 ಹಾಗೂ ಸಿಪಿಐ 25ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಇನ್ನು ಪುದುಚೇರಿಯಲ್ಲಿ ಎನ್.ರಂಗಸ್ವಾಮಿ ನೇತೃತ್ವದ ಭವಿಷ್ಯ ನಿರ್ಧಾರವಾಗಲಿದ್ದು, 30 ಕ್ಷೇತ್ರಗಳಲ್ಲಿ 9.4 ಲಕ್ಷ ಮಂದಿ ಹಕ್ಕು ಚಲಾವಣೆ ಮಾಡಲಿದ್ದಾರೆ. ಬಿಜೆಪಿ, ಎಐಎಡಿಎಂಕೆ ಹಾಗೂ ರಂಗಸ್ವಾಮಿ ಕಾಂಗ್ರೆಸ್ ಪಕ್ಷಗಳು ಎಲ್ಲ 30 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿವೆ.