ಬೆಂಗಳೂರು : ಪೆಟ್ರೋಲ್, ಡೀಸೆಲ್ ಸಾಗಣಿಕೆಗೆ ಎದುರಾಗುತ್ತಿರುವ ಸಮಸ್ಯೆಯನ್ನು ಇಂಧನ ಕಂಪನಿಗಳು ಪರಿಹರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತಿತರ ಇಂಧನ ಪೂರೈಸುವ ಲಾರಿ ಮಾಲೀಕರು ಶುಕ್ರವಾರ ಮತ್ತೆ ಮುಷ್ಕರ ಆರಂಭಿಸುವ ಸಾಧ್ಯತೆ ಇದೆ. ಇದರಿಂದಾಗಿ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಪೇಟ್ರೋಲ್, ಡೀಸೆಲ್ ಸಿಗುವುದು ಅನುಮಾನವಾಗಿದೆ.
ಹೊಸಕೋಟೆಯಿಂದ 12 ಕಿಲೋಮೀಟರ್ ದೂರದಲ್ಲಿರುವ ಎಚ್ಪಿಸಿಎಲ್, ಐಒಸಿ, ಬಿಪಿಸಿಎಲ್ ಕಂಪನಿಗಳಿಂದ ಬೆಂಗಳೂರು ವಿಭಾಗಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯಾಗುತ್ತಿದೆ. ಗ್ರಾಮೀಣ ಭಾಗವಾದ್ದರಿಂದ ಕಿರಿದಾದ ರಸ್ತೆಗಳು ಹಾಗೂ ಕಳಪೆಯಾಗಿರುವ ಕಾರಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರು, ಚಾಲಕರ ಸಂಘಗಳು ಕಳೆದ ತಿಂಗಳು ದಿಢೀರ್ ಮುಷ್ಕರ ನಡೆಸಿದ್ದವು. ಬಳಿಕ ತಿಂಗಳೊಳಗೆ ಸಮಸ್ಯೆ ಪರಿಹರಿಸುವುದಾಗಿ ಕಂಪನಿಗಳು ಭರವಸೆ ನೀಡಿದ್ದವು. ಆದರೆ ಈಗ ಗಡುವು ಮುಗಿಯುತ್ತಿದ್ದರೂ ಸಮಸ್ಯೆಗಳು ಪರಿಹಾರವಾಗಿಲ್ಲದ ಕಾರಣ ಮುಷ್ಕರ ಮತ್ತೆ ನಡೆಯುವ ಸಾಧ್ಯತೆಯಿದೆ.
ದೇವನಗುಂದಿಯಿಂದಲೇ ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪೆಟ್ರೋಲ್-ಡೀಸೆಲ್ ಪೂರೈಕೆಯಾಗುತ್ತಿದೆ. ಹೊಸಕೋಟೆಯಿಂದ ದೇವನಗುಂದಿಗೆ ಸಾಗುವ ರಸ್ತೆಗಳು ಸರಿಯಿಲ್ಲ. ಹೊಸ ರಸ್ತೆ ನಿರ್ವಿುಸಿದರೂ ಅವು ತಿಂಗಳೊಳಗಾಗಿ ಕಿತ್ತು ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ರಸ್ತೆಗಳನ್ನು ನಿರ್ವಿುಸಬೇಕು. ಒಂದುವೇಳೆ ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಕಂಪನಿಗಳೇ ನಿರ್ವಿುಸಬೇಕು ಎಂದು ಮಾಲೀಕರ ಸಂಘ ಒತ್ತಾಯಿಸಿದೆ.
ಶುಕ್ರವಾರ ಮುಷ್ಕರ ಆರಂಭವಾದರೆ ಸೋಮವಾರದವರೆಗೂ ಪೆಟ್ರೋಲ್, ಡೀಸೆಲ್ ದೊರೆಯುವುದು ಅನುಮಾನ. ವಾರಾಂತ್ಯದ ಬಳಿಕ ಅಕ್ಷಯ ತೃತೀಯ ಸಹ ಇರುವುದರಿಂದ ಸಾಲು ರಜೆಗಳಲ್ಲಿ ಪೆಟ್ರೋಲ್ ಸಿಗದೆ ಜನ ಹೈರಾಣಾಗುವ ಸಾಧ್ಯತೆಯಿದೆ ಎನ್ನಲಾಗಿದೆ.