ಲಖ್ನೌ : ಉತ್ತರ ಪ್ರದೇಶದ ಬಲಿಯಾದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಪ್ರಧಾನಿ ನರೇಂದ ಮೋದಿ ಚಾಲನೆ ನೀಡಿದರು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಕಾರ್ಮಿಕ ದಿನವಾದ ಇಂದು ಕಠಿಣ ಪರಿಶ್ರಮದಿಂದ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿರುವ ಕೋಟ್ಯಂತರ ಕಾರ್ಮಿಕರಿಗೆ ದೇಶದ ನಂಬರ್ ಒನ್ ಕಾರ್ಮಿಕನ ಶುಭಾಷಯಗಳು ಎಂದು ತಿಳಿಸಿದರು.
ಜಗತ್ತಿನ ಕಾರ್ಮಿಕರು ಒಂದಾಗಿ ಎಂಬ ಘೋಷವಾಕ್ಯದ ಬದಲಿಗೆ ಕಾರ್ಮಿಕರೇ ಜಗತ್ತನ್ನು ಒಗ್ಗೂಡಿಸಿ ಎಂಬುದಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಕಾರ್ಮಿಕರು ಒಗ್ಗೂಡಿ ಶ್ರಮಿಸುವ ಮೂಲಕ ಜಗತ್ತನ್ನು ಒಂದುಮಾಡಬಹುದು ಎಂದರು.
ದೇಶದ ಸಂಸದರು ಈ ಹಿಂದೆ ತಮ್ಮ ಕ್ಷೇತ್ರದಲ್ಲಿ ಕಡುಬಡವರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು 25 ಕೂಪನ್ ಗಳನ್ನು ಪಡೆದಿದ್ದರು. ಕೆಲವರು ಇದನ್ನು ಮಾರಾಟ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಇದೀಗ 2019ರ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ದೇಶದ 5 ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ನಮ್ಮದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಚಿತ ಗ್ಯಾಸ್ ಫಲಾನುಭವಿಗಳಿಗೆ ಎಲ್ ಪಿ ಜಿ ಸಹ ವಿತರಿಸಿದರು.
ದೇಶದ ಲಕ್ಷಾಂತರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕ ಸಂಬಂಧದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ ಎಂದರು.
ದೇಶದಲ್ಲಿರುವ ಬಡವರನ್ನು ಮೇಲೆತ್ತಲು ನಮ್ಮ ಸರ್ಕಾರ ಜನಗಳನ್ನು ಭಾಗವಹಿಸುವ ಮೂಲಕ ಕೆಲಸ ಮಾಡುತ್ತಿದೆ. ಹಿಂದಿನ ಸರ್ಕಾರ ಜನರ ಮತ ಗಳಿಸುವುದನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರುತ್ತಿತ್ತು ಎಂದು ಹೇಳಿದರು.