ಮುಂಬೈ : ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ 9 ಮಂದಿ ಆರೋಪಿಗಳನ್ನೂ ಮುಂಬೈ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಜಸ್ಟೀಸ್ ವಿ.ವಿ.ಪಾಟೀಲ್ ಪೀಠ, 2006ರ ಮಾಲೇಗಾಂವ್ ಸ್ಫೋಟ ಪ್ರಕರಣದ ಎಲ್ಲಾ 9 ಮಂದಿ ಯುವಕರನ್ನು ದೋಷಾರೋಪದಿಂದ ಮುಕ್ತಗೊಳಿಸಿ ತೀರ್ಪು ನೀಡಿದೆ. ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯ, ಪ್ರಕರಣವನ್ನು ಕೈಬಿಟ್ಟಿದೆ.
2011ರಲ್ಲಿ ಪ್ರಕರಣದಲ್ಲಿನ ಆರು ಮಂದಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಒಬ್ಬ ಆರೋಪಿ ಶಬ್ಬೀರ್ 2015ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇಬ್ಬರು ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ.
ಸಲ್ಮಾನ್ ಫಾರ್ಸಿ, ಶಬೀರ್ ಅಹ್ಮದ್, ನೂರುಲ್ ಹುದಾ ದೋಹ, ರಾಯಿಸ್ ಅಹಮದ್, ಮೊಹಮ್ಮದ್ ಅಲಿ, ಆಸಿಫ್ ಖಾನ್, ಜಾವೇದ್ ಶೇಖ್, ಫರೂಖಿ ಅನ್ಸಾರಿ ಮತ್ತು ಅಬ್ರಾರ್ ಅಹ್ಮದ್ ಅವರು ಆರೋಪದಿಂದ ಮುಕ್ತರಾಗಿರುವ ಆರೋಪಿಗಳು.
2006ರ ಸೆಪ್ಟೆಂಬರ್ 8ರಂದು ನಡೆದ ಮಾಲೇಗಾಂವ್ ಸರಣಿ ಬಾಂಬ್ ಸ್ಫೋಟದಲ್ಲಿ 37 ಮಂದಿ ಬಲಿಯಾಗಿದ್ದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.