ನವದೆಹಲಿ : ಭಾರತದಲ್ಲಿರುವ ಹಿಂದೂಗಳನ್ನು ನಾಶ ಮಾಡುವ ಮೂಲಕ ಹಿಂದೂಸ್ತಾನದಲ್ಲಿ ಷರಿಯಾ ಕಾನೂನು ಜಾರಿಗೊಳಿಸುವ ವಿಶ್ವದ ಅತ್ಯಂತ ಪ್ರಭಾವಿ ಉಗ್ರಗಾಮಿ ಸಂಘಟನೆ ಐಸಿಸ್ ಮುಂದಾಗಿದೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ನೆರವಿನೊಂದಿಗೆ ಭಾರತದ ಮೇಲೆ ಗೆರಿಲ್ಲಾ ದಾಳಿ ನಡೆಸಿ ಹಿಂದುಗಳ ಸರ್ವನಾಶ ಮಾಡುವುದಾಗಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಎಚ್ಚರಿಕೆ ನೀಡಿದೆ. ತನ್ನ ಮುಖವಾಣಿ ಆನ್ಲೈನ್ ಮ್ಯಾಗಜೀನ್ ‘ದಬಿಕ್’ಗೆ ಸಂದರ್ಶನ ನೀಡಿರುವ ಐಸಿಸ್ ನ ಬಾಂಗ್ಲಾದೇಶ ಘಟಕದ ಮುಖ್ಯಸ್ಥ ಶೇಖ್ ಅಬು ಇಬ್ರಾಹಿಂ ಅಲ್ ಹನೀಫ್ ಈ ಬಗ್ಗೆ ಹೇಳಿಕೊಂಡಿದ್ದು, ಭಾರತದಲ್ಲಿ ಷರಿಯಾ ಕಾನೂನು ಜಾರಿಗೊಳಿಸವುದೇ ನಮ್ಮ ಗುರಿ ಎಂದು ಹೇಳಿಕೊಂಡಿದ್ದಾನೆ. ಇದಕ್ಕಾಗಿ ಭಾರತದ ವಿರುದ್ಧ ಗೆರಿಲ್ಲಾ ಯುದ್ಧ ಮಾಡಲು ನಾವು ಸಜ್ಜಾಗಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಇತರೆ ಉಗ್ರಗಾಮಿ ಸಂಘಟನೆಗಳ ನೆರವು ಕೂಡ ಪಡೆಯುತ್ತೇವೆ ಎಂದು ಹೇಳಿದ್ದಾನೆ.
ಭಾರತದಲ್ಲಿರುವ ಧರ್ಮಗಳ ನಡುವೆ ಬಿರುಕು ಮೂಡಿಸಿ ಅಲ್ಲಿ ಗಲಭೆ ಎಬ್ಬಿಸಿದರೆ ನಮ್ಮ ಗುರಿಯನ್ನು ನಾವು ಸುಲಭವಾಗಿ ತಲುಪಬಹುದು ಎಂದು ಹೇಳಿರುವ ಉಗ್ರ ಹನೀಫ್, ತನ್ನ ಉಗ್ರರಿಗೆ ಭಾರತದಲ್ಲಿ ಸಂಘಟನೆಯನ್ನು ಪಸರಿಸಲು ಸೂಚನೆ ನೀಡಿದ್ದಾನೆ. ಅಗತ್ಯ ಬಿದ್ದರೆ ಇದಕ್ಕಾಗಿ ಬಾಂಗ್ಲಾದೇಶದ ಉಗ್ರರನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾನೆ.
ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆ ವಿಲಾಯತ್ ಖುರಾಸನ್ ಮತ್ತು ಸ್ಥಳೀಯರ ನೆರವಿನೊಂದಿಗೆ ಭಾರತದ ಮೇಲೆ ದಾಳಿ ನಡೆಸಿ ಎಲ್ಲ ಹಿಂದುಗಳನ್ನು ನಾಶಗೊಳಿಸಿ, ಷರಿಯಾ ಕಾನೂನನ್ನು ಜಾರಿಗೆ ತರಲಿದ್ದೇವೆ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ತರಬೇತಿ ಪಡೆದಿರುವ ಉಗ್ರರು ಗೆರಿಲ್ಲಾ ದಾಳಿ ನಡೆಸಲಿದ್ದಾರೆ ಎಂದು ಹನೀಫ್ ಹೇಳಿದ್ದಾನೆ.