ಡೆಹ್ರಾಡೂನ್ : ಉತ್ತರಾಖಂಡ್ ದಲ್ಲಿನ ರಾಷ್ಟ್ರಪತಿ ಆಡಳಿತಕ್ಕೆ ತಡೆ ನೀಡಿ, ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಬಹುಮತ ಸಾಬೀತಿಪಡಿಸಲು ಅವಕಾಶ ನೀಡಿದ್ದ ಉತ್ತರಾಖಂಡ್ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿದೆ.
ಮಾರ್ಚ್ 31ರಂದು ನಡೆಯಬೇಕಿದ್ದ ಉತ್ತರಾಖಂಡ ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಗೆ ಏಕ ನ್ಯಾಯಾಧೀಶ ಪೀಠವು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಕೆ.ಎಂ.ಜೋಸೆಫ್ ಮತ್ತು ಜಸ್ಟಿಸ್ ವಿ.ಕೆ.ಬಿಷ್ಟ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಸದನ ಬಲಾಬಲ ಪರೀಕ್ಷೆಗೆ ಎ.7ರ ವರೆಗೆ ತಡೆಯಾಜ್ಞೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಎ.6ಕ್ಕೆ ನಡೆಯಲಿದೆ.
ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ’ರಾಷ್ಟ್ರಪತಿ ಘೋಷಣೆಯಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವಂತಿಲ್ಲ' ಎಂದು ಹೇಳಿದರು.
ವಿಭಾಗೀಯ ಪೀಠದ ಈ ತಡೆಯಾಜ್ಞೆಯನ್ನು ಸ್ವಾಗತಿಸಿರುವ ಬಿಜೆಪಿಯ ಕೈಲಾಶ್ ವಿಜಯವರ್ಗೀಯ, ’ಏಕ ನ್ಯಾಯಾಧೀಶ ಪೀಠದ ಆದೇಶವನ್ನು ತರಾತುರಿಯಲ್ಲಿ ನೀಡಲಾಗಿದೆ' ಎಂದು ತಿಳಿಸಿದ್ದಾರೆ.