ನವದೆಹಲಿ : ಕೃಷಿ ಪದ್ಧತಿಗಳನ್ನು ಆಧುನೀಕರಣಗೊಳಿಸುವುದು ಮತ್ತು ಕೃಷಿಯಲ್ಲಿ ತಂತ್ರಜ್ಞಾನವನ್ನು ಉಪಯೋಗಿಸುವುದು ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಮೂರು ದಿನದ ಕೃಷಿ ಉನ್ನತಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರೈತರ ಮೂಲಕ ಹಳ್ಳಿಗಳಿಂದ ಭಾರತದಲ್ಲಿ ಪರಿವರ್ತನೆ ಆಗುತ್ತದೆ ಎಂದು ಹೇಳಿದರು.
ಮೊದಲ ಹಸಿರು ಕ್ರಾಂತಿ ಒಳ್ಳೆಯ ನೀರಾವರಿ ಪ್ರದೇಶಗಳಲ್ಲಾಯಿತು. ಈಗ ಎರಡನೇ ಹಸಿರು ಕ್ರಾಂತಿ, ತಂತ್ರಜ್ಞಾನ ಮತ್ತು ಆಧುನೀಕರಣದ ಬಲದೊಂದಿಗೆ ಆಗಬೇಕು. ಮೊದಲ ಹಸಿರು ಕ್ರಾಂತಿ ಪಶ್ಚಿಮ ಮತ್ತು ಉತ್ತರ ಭಾರತವನ್ನು ಕೇಂದ್ರೀಕರಿಸಿತ್ತು. ಎರಡನೇ ಹಸಿರು ಕ್ರಾಂತಿ ಪೂರ್ವ ಭಾರತದಿಂದ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹಳ್ಳಿಯಲ್ಲಿರುವವರ ಖರೀದಿ ಮಾಡುವ ಶಕ್ತಿಯನ್ನು ನಾವು ಹೆಚ್ಚಿಸಬೇಕು. ಅದಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕು ಎಂದು ಹೇಳಿದರು.
ಈ ವರ್ಷದ ಬಜೆಟ್ ಬಡವರ, ಹಳ್ಳಿಯವರ ಮತ್ತು ರೈತರ ಬಜೆಟ್ ಆಗಿರುವುದರಿಂದ, ಹೆಚ್ಚು ಮೆಚ್ಚುಗೆಗಳಿಸಿದೆ ಎಂದು ಪ್ರಧಾನಿ ನುಡಿದರು.
ಮುಂದಿನ ಕೆಲವು ವರ್ಷಗಳಲ್ಲಿ ರೈತರ ಆದಾಯವನ್ನು ಎರಡರಷ್ಟು ಮಾಡಲು ಸಹಾಯವಾಗುವಂತ ಮಾಹಿತಿ, ಯೋಜನೆಗಳು ಮತ್ತು ತಂತ್ರಜ್ಞಾನದ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಕೃಷಿ ಉನ್ನತಿ ಮೇಳವನ್ನು ಆಯೋಜಿಸಲಾಗಿದೆ.