ಬೆಂಗಳೂರು : ಮುಖ್ಯಮಂತ್ರಿಯಾಗಿ ನಾಲ್ಕನೆಯ ಹಾಗೂ ಒಟ್ಟಾರೆ 11ನೇ ಬಾರಿಗೆ ಮುಂಗಡ ಪತ್ರವನ್ನು ಶುಕ್ರವಾರ ಬೆಳಗ್ಗೆ 11.30ಕ್ಕೆ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಗಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕಳೆದ ನಾಲ್ಕು ಬಾರಿ ಅಹಿಂದ, ಕೃಷಿ, ಗ್ರಾಮೀಣ ಭಾಗಗಳಿಗಿದ್ದ ಆದ್ಯತೆಯನ್ನು ತುಸು ಬದಲಾಯಿಸಿ ಅಭಿವೃದ್ಧಿ ಕಡೆ ಗಮನ ಹರಿಸಿವರೇ ಎಂದು ಕಾದು ನೋಡಬೇಕಿದೆ.
ಜತೆಗೆ, ಕಳೆದ ಒಂದು ವರ್ಷದಲ್ಲಿ 1,200ಕ್ಕೂ ಹೆಚ್ಚು ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರೈತರಿಗೆ ಸಾಂತ್ವನ ನೀಡುವಂತಹ ಮಹತ್ವದ ನಿರ್ಧಾರಗಳು ಹೊರಬೀಳಲಿವೆಯೇ ಎಂಬ ನಿರೀಕ್ಷೆಯ ಇದೆ.
ಮುಖ್ಯಮಂತ್ರಿಗಳ ಆಪ್ತ ಮೂಲಗಳ ಪ್ರಕಾರ ಶುಕ್ರವಾರ ಮಂಡನೆಯಾಗಲಿರುವ ಬಜೆಟ್ನಲ್ಲಿ ಪ್ರಮುಖ ಕ್ಷೇತ್ರಗಳಾದ ಕೃಷಿ ಹಾಗೂ ನೀರಾವರಿಯ ಜತೆಗೆ ಕೈಗಾರಿಕೆ, ಮೂಲಸೌಕರ್ಯ, ಶಿಕ್ಷಣ ಮತ್ತಿತರ ವಲಯಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನಾಲ್ಕನೇ ಹಾಗೂ ಹಣಕಾಸು ಸಚಿವರಾಗಿ ಹನ್ನೊಂದನೆಯ ಬಜೆಟ್ ಮಂಡಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 13 ಬಾರಿ ಬಜೆಟ್ ಮಂಡಿಸಿರುವುದು ಇದುವರೆಗಿನ ದಾಖಲೆಯಾಗಿದೆ.