ನವದೆಹಲಿ : ಬುಧವಾರ ಲೋಕಸಭೆಯಲ್ಲಿ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಜೆ ಎನ್ ಯು ವಿವಾದದ ಕುರಿತು ಖಡಕ್ ಉತ್ತರ ನೀಡಿದ್ದಾರೆ. ಕೆಲವು ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಜೆ ಎನ್ ಯು ಅಧಿಕಾರಿಗಳೇ ಹೇಳಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಸ್ಮೃತಿ ಇರಾನಿ, ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೆಮುಲ ಆತ್ಮಹತ್ಯೆಯ ಕುರಿತು ಭಾವನಾತ್ಮಕವಾಗಿ ವಿವರಿಸಿದರು.
ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ಈ ಮಾತುಗಳ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾತುಗಳನ್ನು ಕೇಳಿ ಎಂದಿದ್ದಾರೆ.
ರೋಹಿತ್ ವೆಮುಲ ಆತ್ಮಹತ್ಯೆಯ ಕುರಿತು ಸ್ಮೃತಿ ಇರಾನಿ ಅವರು, ಇದರಲ್ಲಿ ತಮ್ಮ ಸಚಿವಾಲಯದ ಯಾವುದೇ ಪಾತ್ರವಿಲ್ಲ ಮತ್ತು ಆತ್ಮಹತ್ಯೆ ಮಾಡಿಕೊಂಡವನೇ ತನ್ನ ಈ ನಿರ್ಧಾರಕ್ಕೆ ಯಾರೂ ಕಾರಣರಲ್ಲ ಎಂದು ಹೇಳಿದ್ದಾನೆ ಎಂದರು. ಅಲ್ಲದೆ ವಿದ್ಯಾರ್ಥಿಗಳನ್ನು ಪ್ರತಿಪಕ್ಷಗಳು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ ಎಂದು ಕಿಡಿಕಾರಿದ ಸ್ಮತಿ, ರಾಷ್ಟ್ರಪತಿಗಳ ವಿರುದ್ಧ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕರು, ಮತ್ತೊಂದೆಡೆ ರಾಷ್ಟ್ರಪತಿ ಬಳಿ ತೆರಳಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಸಚಿವರು ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪಗಳಿಗೆ ಭಾವನಾತ್ಮಕವಾಗಿ ತಿರುಗೇಟು ನೀಡಿದ ಸ್ಮತಿ, ನನ್ನ ಹೆಸರು ಸ್ಮತಿ ಇರಾನಿ, ಯಾರಿಗಾದರೂ ನನ್ನ ಜಾತಿ ಗೊತ್ತಿದ್ದರೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ಜೆ ಎನ್ ಯು ಘಟನೆಯ ಕುರಿತು ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಸಚಿವೆ, ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಚುನಾವಣೆಗೆ ನಿಂತಿದ್ದರಿಂದ ಕಾಂಗ್ರೆಸ್ ನವರು ತನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಹೇಳಿದರು. ರಾಹುಲ್ ಎಂದೂ ಒಂದೇ ಸ್ಥಳಕ್ಕೆ 2 ಬಾರಿ ಭೇಟಿ ಕೊಟ್ಟದ್ದಿಲ್ಲ. ಆದರೆ, ಹೈದರಾಬಾದ್ ಕ್ಯಾಂಪಸ್ಸಲ್ಲಿ ಅವರಿಗೆ ರಾಜಕೀಯ ಅವಕಾಶ ಕಂಡಿತು ಎಂದು ಹೇಳಿದರು.
ಕಳೆದ 20 ತಿಂಗಳಿನಲ್ಲಿ ತಮ್ಮ ಸರ್ಕಾರ ವಿದ್ಯಾರ್ಥಿಗಳ ದೂರುಗಳನ್ನು ಕೇಳಿ, ಅವರ ಜಾತಿ ಧರ್ಮ ಕೇಳದೇ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದರು.
ಜೆ ಎನ್ ಯು ರಕ್ಷಣಾದಳದವರ ವರದಿಯನ್ನು ಪ್ರಸ್ತುತ ಪಡಿಸಿದ ಸಚಿವೆ, ಕವನ ಕಾರ್ಯಕ್ರಮಕ್ಕಾಗಿ ಅನುಮತಿ ಪಡೆದುಕೊಂಡ ಕೆಲ ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿರುವುದಾಗಿ ವರದಿಯಾಗಿದೆ ಎಂದರು.
ನಾವು ನಿಮ್ಮ (ಪ್ರತಿಪಕ್ಷಗಳ) ದೇಶಪ್ರೇಮಕ್ಕೆ ಸರ್ಟಿಫಿಕೇಟ್ ಕೊಡೋದಿಲ್ಲ. ಆದರೆ, ನಮ್ಮ ದೇಶಪ್ರೇಮವನ್ನು ನೀವು ತುಚ್ಛವಾಗಿ ಕಾಣಬೇಡಿ. ನಮ್ಮ ಮಕ್ಕಳು ದೇಶದ ಭವಿಷ್ಯ. ಅವರನ್ನು ವೋಟ್ಬ್ಯಾಂಕ್ ಆಗಿ ನೋಡಬೇಡಿ. ನಾನು ನನ್ನ ಕೆಲಸ ಮಾಡಿದ್ದೇನೆ. ಯಾರದ್ದೂ ಕ್ಷಮೆ ಕೇಳಲ್ಲ ಎಂದು ಸ್ಮೃತಿ ಇರಾನಿ ನುಡಿದರು.