ನವದೆಹಲಿ : ಮಂಗಳವಾರದಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ.ಕಳೆದ ಎರಡು ಅಧಿವೇಶನಗಳೂ ಪ್ರತಿಪಕ್ಷದ ಗದ್ದಲದ ನಡುವೆ, ಯಾವುದೆ ಚರ್ಚೆ ನಡೆಯದೇ ಬಲಿಯಾಗಿವೆ. ಆದ್ದರಿಂದ ಈಗ ಎಲ್ಲರ ದೃಷ್ಟಿ ಬಜೆಟ್ ಅಧಿವೇಶನದ ಮೇಲೆ.
ಬಜೆಟ್ ಅಧಿವೇಶನದಲ್ಲಿಯೂ ಹೈದರಾಬಾದ್ ಕೇಂದ್ರೀಯ ವಿವಿ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ, ಜವಾಹರ್ಲಾಲ್ ನೆಹರು ವಿವಿಯಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ ಸಂಬಂಧ ಬಂಧಿತನಾಗಿರುವ ಕನ್ಹಯ್ಯ ಕುಮಾರ್ ವಿಚಾರಗಳನ್ನು ಮುಂದು ಮಾಡಿ ಪ್ರತಿಪಕ್ಷಗಳು ಸಂಸತ್ ಅಧಿವೇಶನಕ್ಕೆ ತಡೆಯೊಡ್ಡಬಹುದು.
ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗುವ ಹಿಂದಿನ ದಿನವಾದ ಸೋಮವಾರ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ಅಧಿವೇಶನ ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಡುವಂತೆ ಪ್ರತಿಪಕ್ಷಗಳ ಸದಸ್ಯರಿಗೆ ಮನವಿ ಮಾಡಿದ್ದಾರೆ.
ಆದರೆ ಸರ್ವ ಪಕ್ಷಗಳ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಜೆಎನ್ಯು ಪ್ರಕರಣದ ಸಂಬಂಧ ಅಮಾಯಕ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಕನ್ಹಯ್ಯ ಬಿಡುಗಡೆ ಮಾಡದಿದ್ದರೆ ಸಂಸತ್ ಅಧಿವೇಶನ ಸುಸೂತ್ರವಾಗಿ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ಸುತ್ತಿನ ಸಮರಕ್ಕೆ ಸಜ್ಜಾಗಿವೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರಕಾರ, ಸಂಸತ್ತಿನಲ್ಲಿ ಎಲ್ಲ ವಿಚಾರಗಳ ಚರ್ಚೆ ನಡೆಸಲು ಅವಕಾಶ ಮಾಡಿಕೊಡಲು ಸಿದ್ಧ ಎಂದು ಹೇಳುವ ಮೂಲಕ, ಪ್ರತಿಪಕ್ಷಗಳು ಅಧಿವೇಶನ ನಡೆಯಲು ಅವಕಾಶ ಕೋರಿದೆ.