ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾದ ಹಿನ್ನಲೆಯಲ್ಲಿ 10 ಯೋಧರು ನಾಪತ್ತೆಯಾಗಿರುವುದಾಗಿ ಬುಧವಾರ ವರದಿಯಾಗಿದೆ. ಭಾರತ -ಪಾಕಿಸ್ತಾನ ಗಡಿ ಪ್ರದೇಶದ ಸಿಯಾಚಿನ್ನ ಉತ್ತರ ಪ್ರಾಂತ್ಯದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಹಿಮಪಾತದಡಿಯಲ್ಲಿ ಸಿಲುಕಿರುವ ಯೋಧರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.
ಮದ್ರಾಸ್ ರೆಜಿಮೆಂಟ್ಗೆ ಸೇರಿದ 10 ಮಂದಿ ಸೈನಿಕರು ಬೆಳಗ್ಗಿನ ಜಾವ 5, 800 ಮೀಟರ್ ಎತ್ತರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಭಾರೀ ಪ್ರಮಾಣದ ಹಿಮಪಾತಕ್ಕೆ ಸಿಲುಕಿದ್ದರು ಎಂದು ಕರ್ನಲ್ ಎಸ್. ಗೋಸ್ವಾಮಿ ತಿಳಿಸಿದ್ದಾರೆ.
ಹಿಮಪಾತದೊಳಗೆ ನಾಪತ್ತೆಯಾದ ಸೈನಿಕರನ್ನು ಪತ್ತೆಹಚ್ಚಿ ಅವರನ್ನು ರಕ್ಷಿಸಲು ವಾಯುಪಡೆ ಕಾರ್ಯಾಚರಣೆ ಆರಂಭಿಸಿದೆ ಎಂದು ಗೋಸ್ವಾಮಿ ತಿಳಿಸಿದರು. ಸದ್ಯ ಸಿಯಾಚಿನ್ನಲ್ಲಿ ಉಷ್ಣಾಂಶ ಮೈನಸ್ 60 ಡಿಗ್ರಿಗೆ ಇಳಿದಿದೆ.