ಚಂಡೀಗಢ : ಭಾರತ ಮತ್ತು ಫ್ರಾನ್ಸ್ ಮಾನವೀಯತೆಯ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಜೊತೆಯಾಗಿ ನಿಲ್ಲುತ್ತವೆ ಎಂದು ಪ್ರಧಾನಿ ಮೋದಿ ಭಾನುವಾರ ಭಯೋತ್ಪಾದನೆಯ ವಿರುದ್ಧದ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.
ಭಾನುವಾರ ಚಂಡಿಗಢದಲ್ಲಿ ನಡೆದ ಭಾರತ-ಫ್ರಾನ್ಸ್ ವಾಣಿಜ್ಯ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ನ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್, ಎರಡೂ ದೇಶಗಳು ಉಗ್ರರ ದಾಳಿಯ ಸಂತ್ರಸ್ತರು. ಭವಿಷ್ಯದಲ್ಲಿನ ದಾಳಿ ಎದುರಿಸಲು ಎರಡೂ ದೇಶಗಳು ಜೊತೆಯಾಗಬೇಕೆಂದರು.
ಪ್ಯಾರೀಸ್ ನಲ್ಲಿ ಉಗ್ರರು ದಾಳಿ ನಡೆಸಿದ ದಿನದಂದೇ ನಾನು ಫ್ರಾಂಕೋಯಿಸ್ ಈ ವರ್ಷದ ಗಣರಾಜ್ಯೋತ್ಸವದ ಅತಿಥಿಯಾಗಬೇಕೆಂದು ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಫ್ರಾನ್ಸ್ ತನ್ನ ತತ್ವಗಳನ್ನು ಮತ್ತು ಪ್ರಗತಿಯ ಪ್ರಯಾಣದಿಂದ ವ್ಯತ್ಯಾಸವಿಲ್ಲದೇ ಭಯೋತ್ಪಾದನೆ ಹೋರಾಟದ ರೀತಿಯನ್ನು ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯನ್ನು ಎದುರಿಸುವ ಫ್ರಾನ್ಸ್ ನ ರೀತಿಯನ್ನು ಹೊಗಳಿದರು.
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿ ಒಪ್ಪಿಕೊಂಡ ಹೊಲಾಂಡ್ ಅವರಿಗೆ ಧನ್ಯವಾದ ತಿಳಿಸಿದರು. ಎರಡೂ ದೇಶಗಳ ಸಹಯೋಗದಿಂದ ಆರ್ಥಿಕವಾಗಿ ಸಹ ಲಾಭಗಳಿಸಬಹುದು. ಭಾರತದ ಪ್ರತಿಭೆ ಮತ್ತು ಫ್ರಾನ್ಸ್ ನ ತಯಾರಿಕಾ ಸಾಮರ್ಥ್ಯ ಒಟ್ಟಿಗೆ ಸೇರಿದರೆ ಬಹಳಷ್ಟು ಸಾಧಿಸಬಹುದೆಂದರು. ಈ ಸಂದರ್ಭದಲ್ಲಿ 16 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಸಹ ಭಾರತದೊಂದಿಗಿನ ಸಂಬಂಧ ಅಭಿವೃದ್ಧಿಗೆ ತಮ್ಮ ಸಹಮತ ವ್ಯಕ್ತಪಡಿಸಿದರು. ನನಗೆ ನರೇಂದ್ರ ಮೋದಿ ಜೊತೆ ಸಂಬಂಧದ ಬಗ್ಗೆ ನಂಬಿಕೆ ಇದೆ. ನಾನು ಭಾರತದೊಂದಿಗಿನ ಸಹಯೋಗವನ್ನು ಕ್ರೋಢೀಕರಿಸಲು ಮತ್ತು ಪ್ರಧಾನಿ ಮೋದಿ ಅವರು ಫ್ರಾನ್ಸ್ ಭೇಟಿಯ ವೇಳೆ ತೆಗೆದುಕೊಂಡ ನಿರ್ಧಾರಗಳನ್ನು ಜಾರಿಗೆ ತರಲು ಬಯಸುತ್ತೇನೆ ಎಂದು ಹೊಲಾಂಡ್ ತಿಳಿಸಿದರು.