ಉಡುಪಿ : ಸೋಮವಾರ ಪ್ರಾತಃಕಾಲದಲ್ಲಿ ಪೇಜಾವರ ಶ್ರೀ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪರ್ಯಾಯ ಪೀಠಾರೋಹಣ ಮಾಡುವ ಮೂಲಕ ಐತಿಹಾಸಿಕ ದಾಖಲೆಯ ಪಂಚಮ ಪರ್ಯಾಯದ ಅಪೂರ್ವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶ್ರೀವಾದಿರಾಜರ ಬಳಿಕ 415 ವರ್ಷಗಳ ಅನಂತರ ಐದನೇ ಬಾರಿಗೆ ಪೇಜಾವರ ಶ್ರೀ ಶ್ರೀ ಸರ್ವಜ್ಞಪೀಠ ಅಲಂಕರಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ 1.30ಕ್ಕೆ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ 2 ಗಂಟೆಗೆ ಜೋಡುತೀರ್ಥಕ್ಕೆ ವಿಶ್ವೇಶ ಶ್ರೀಗಳು ಆಗಮಿಸಿದ ಬಳಿಕ ವೈಭವದ ಮೆರವಣಿಗೆ ನಡೆಯಿತು. ಪರ್ಯಾಯ ಪೀಠದಿಂದ ಇಳಿಯುವ ಕಾಣಿಯೂರು ಶ್ರೀಗಳು ಪರ್ಯಾಯ ಪೀಠ ಏರಲಿರುವ ಯತಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಕೃಷ್ಣ ಮಠದ ಒಳಗೆ ಪ್ರವೇಶ ಮಾಡಿದ ಪೇಜಾವರ ಶ್ರೀಗಳು ಮಧ್ವ ಸರೋವರದಲ್ಲಿ ಮಿಂದು, ಶ್ರೀ ಕೃಷ್ಣ ಮಠದೊಳಗೆ ಬಂದು, ಮುಖಮಂಟಪದಲ್ಲಿ ಪಟ್ಟದ ದೇವರನ್ನಿಟ್ಟು ಪೂಜಿಸಿ, ಶ್ರೀ ಮುಖ್ಯಪ್ರಾಣ ದೇವರನ್ನು ಪ್ರಾರ್ಥಿಸಿದರು. ಇದೇ ಹೊತ್ತಿಗೆ ಕಾಣಿಯೂರು ಶ್ರೀಗಳು ಅಕ್ಷಯ ಪಾತ್ರೆ ಹಾಗೂ ಬೀಗದ ಕೈಗಳನ್ನು ಪೇಜಾವರ ಶ್ರೀಗಳಿಗೆ ಹಸ್ತಾಂತರಿಸುವ ಮೂಲಕ ಶ್ರೀ ಕೃಷ್ಣ ಪೂಜಾಧಿಕಾರ ಹಾಗೂ ಆಡಳಿತಾಧಿಕಾರವನ್ನು ವರ್ಗಾಯಿಸಿದರು.
ಪರ್ಯಾಯ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾನಿ, ಕೇಂದ್ರ ಸಚಿವೆ ಉಮಾಭಾರತಿ, ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ. ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕರಾದ ಪ್ರಮೋದ್ ಮಧ್ವರಾಜ್, ಸಿ.ಟಿ. ರವಿ ಮುದಲಾದವರು ಭಾಗವಹಿಸಿದ್ದರು.