ಮೈಸೂರು : ಮಠಗಳು, ಸಾಧು ಸಂತರಿಂದ ಸಮಾಜ ಸುಧಾರಣೆ ಕೆಲಸ ಆಗುತ್ತಿದೆ. 18-19 ನೇ ಶತಮಾನದಲ್ಲಿ ಸಂತರಿಂದ ಭಕ್ತಿ ಯುಗ ಪ್ರಾರಂಭವಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾಗೃತಿ ಮೂಡಿಸುವ ಕೆಲಸವಾಯಿತು ಎಂದು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎರಡು ದಿನದ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಮಹಾರಾಜ ಕಾಲೇಜ್ ಮೈದಾನದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದರು.
ತಮ್ಮ ಭಾಷಣವನ್ನು ಕನ್ನಡದಲ್ಲಿ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಂಧು, ಭಗಿನಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು. ಇಷ್ಟೋಂದು ಸಂಖ್ಯೆಯಲ್ಲಿ ಜನ ಸೇರಿರುವುದು ನನಗೆ ಖುಶಿ ನೀಡಿದೆ. ಇದು ನನ್ನ ಸೌಭಾಗ್ಯ. ಸಮಾನತೆ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಂತಹ ನೆಲದಲ್ಲಿ ನಾನಿದ್ದೇನೆ. ಲಂಡನ್ ಗೆ ಹೋದಾಗ ಬಸವಣ್ಣನವರ ಪುತ್ಠಳಿ ಅನಾವರಣ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಮಠಗಳು, ಸಂತರು ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ. ಸಂತರು ಈ ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ದುಷ್ಟರ ವಿರೋಧದ ನಡುವೆಯೂ ಸಮಾಜ ಕಟ್ಟಿದ್ದಾರೆ. ಸ್ವಾಸ್ಥ್ಯ ಸಮಾಜ ಕಟ್ಟಿದವರು ನಮ್ಮ ದೇಶದ ಸಂತರು. ಅಂತಹ ನೂರಾರು ಸಂತರು ಇಲ್ಲಿದ್ದಾರೆ ಎಂದರು. ಸರ್ಕಾರದಿಂದ ಆಗಬೇಕಾದ ಎಷ್ಟೋ ಕೆಲಸ ಸಂತರಿಂದ ಆಗುತ್ತಿದೆ ಎಂದರು.
ಇದೇ ಸಂದರ್ಭ ಪಠಾಣ್ ಕೋಟ್ ದಾಳಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, ನಮ್ಮ ದೇಶದ ಸಿಪಾಯಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಪಾಕಿಸ್ತಾನಕ್ಕೆ ದಿಟ್ಟ ಎದಿರೇಟು ನೀಡಲು ಅವರು ಸಮರ್ಥರು. ಅವರ ಪರಿಶ್ರಮದಿಂದಾಗಿ ನಾವಿಂದು ನೆಮ್ಮದಿಯಾಗಿದ್ದೇವೆ. ಅವರಿಗೆ ದೇಶದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದಕ್ಕೂ ಮೊದಲು ಸಂಜೆ ಸಂಜೆ ಸುಮಾರು 5.15ರ ಸುಮಾರಿಗೆ ಮೈಸೂರಿನ ಮಂಡಕ್ಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರನ್ನು ರಾಜ್ಯಪಾಲ ವಾಜೂಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ವಾಗತಿಸಿದರು. ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ಸಹ ಹಾಜರಿದ್ದರು.
ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರಿನ ಗೌರಿಶಂಕರ ನಗರದಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿನ ಎಸ್ಜಿಎಸ್ ಆಸ್ಪತ್ರೆ ಉದ್ಘಾಟನೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, ನಾನು ಇಲ್ಲಿಗೆ ಮೊದಲ ಭಾರಿ ಬಂದಿರುವುದು ಆದರೂ ಇಲ್ಲಿಯ ಸಂಪ್ರದಾಯಗಳು ಆರಿವಿದೆ. ನನಗೆ ಇಂದು ದತ್ತ ಪೀಠಕ್ಕೆ ಆವಕಾಶ ಸಿಕ್ಕಿದೆ ಈ ಪರಂಪರೆ ದೇಶದ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದರು.
ಮೈಸೂರಿನಲ್ಲೇ ಶನಿವಾರ ವಾಸ್ತವ್ಯ ಹೂಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲಲಿತ್ ಮಹಲ್ ಹೋಟೆಲ್ ನಲ್ಲಿ ತಂಗಲಿದ್ದಾರೆ.