ಬೆಂಗಳೂರು : ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಅವರನ್ನು ಹೋಲುವ ವ್ಯಕ್ತಿಯನ್ನು ಬಳಸಿ ಅಶ್ಲೀಲ ಚಿತ್ರದ ನಕಲಿ ಸಿ.ಡಿ. ಹಾಗೂ ಅವಹೇಳನಕಾರಿ ಲೇಖನದ ಪ್ರತಿಗಳನ್ನು ಹಂಚುತ್ತಿದ್ದ ಕಿಡಿಗೇಡಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸರಕಾರ ಏಕಾಏಕಿ ಹಿಂತೆಗೆದುಕೊಂಡಿರುವುದು ತೀವ್ರ ವಿವಾದಕ್ಕೆ ಎಡೆಯಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಂಶಗಳು ಬೆಳಕಿಗೆ ಬಂದಿವೆ.
ಈ ಮೊಕದ್ದಮೆಯನ್ನು ಹಿಂಪಡೆಯುವುದು ಸೂಕ್ತವಲ್ಲ ಎಂದು ಸರಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಅಭಿಯೋಗ ಹಾಗೂ ಕಾನೂನು ಇಲಾಖೆ ಹೇಳಿದರೂ ಅದನ್ನು ಕಡೆಗಣಿಸಿ ಪ್ರಕರಣವನ್ನು ಹಿಂದಕ್ಕೆ ಪಡೆವುವ ನಿರ್ಧಾರಕ್ಕೆ ಸರಕಾರ ಬಂದಿರುವ ಸಂಗತಿ ಈಗ ಬೆಳಕಿಗೆ ಬಂದಿದೆ.
ಬಲವಾದ ಸಾಕ್ಷ್ಯಗಳನ್ನು ಹೊಂದಿರುವ ಈ ಪ್ರಕರಣವನ್ನು ಹಿಂಪಡೆದರೆ ಸಾರ್ವಜನಿಕರಿಗೆ ಕಾನೂನಿನ ಕುರಿತು ಇರುವ ಗೌರವ ಮತ್ತು ಮೌಲ್ಯಕ್ಕೆ ಕುಂದುಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಆರೋಪಿಗಳಿಗೂ ಕಾನೂನಿನ ಕುರಿತು ಗೌರವ ಇಲ್ಲದೆ ಮತ್ತೆ ಇಂಥ ಹೇಯ ಕೃತ್ಯ ಎಸಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಪ್ರಕರಣ ಹಿಂಪಡೆಯಲು ಸೂಕ್ತ ಕಾರಣ ಇಲ್ಲ ಮತ್ತು ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿತ್ತು.
ಕಾನೂನಿ ಇಲಾಖೆ ಸೇರಿದಂತೆ ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಧಿಕ್ಕರಿಸಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಮೇ 6, 2015ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಗೋಕರ್ಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೃಹ ಸಚಿವರಿಗೆ ಸಲ್ಲಿಸಿದ ಮನವಿ ಆಧರಿಸಿ, ಆರೋಪಿಗಳ ವಿರುದ್ಧ 2010ರ ಎಪ್ರಿಲ್ 1ರಂದು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯಲು ತೀರ್ಮಾನಿಸಲಾಗಿತ್ತು. ನಂತರ ಅಗಸ್ಟ್ 7ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿ ನವಂಬರ್ 4ರಂದು ಅಧಿಕೃತ ಆದೇಶ ಹೊರಡಿಸಲಾಯಿತು ಎಂದು ತಿಳಿದು ಬಂದಿದೆ.
ಸರಕಾರದ ಈ ತುರಾತುರಿಯ ನಿರ್ಧಾರ ಮಠದ ಭಕ್ತ ಶಿಷ್ಯರೂ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ, ಸಂಶಯಗಳಿಗೆ ಎಡೆಮಾಡಿದ್ದು, ಅಂಥ ಹೀನ ಕುಕೃತ್ಯ ನಡೆಸಿದ ಕ್ರಿಮಿನಲ್ ಅಪರಾಧಿಗಳನ್ನು ರಕ್ಷಿಸುವ ನಿರ್ಧಾರ ಸರಕಾರ ಮಾಡಿರುವುದರ ಹಿಂದೆ ಯಾರ ಕೈವಾಡ ಇದೆ? ರಾಜ್ಯದ ಇತಿಹಾಸದಲ್ಲೇ ಇದೊಂದು ಪ್ರಥಮವಾದ ನಿರ್ಧಾರವಾಗಿದ್ದು, ಸರಕಾರ ಇಂಥ ನಿರ್ಧಾರಕ್ಕೆ ಬರಲು ಕಾರಣಗಳೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.
ಪ್ರಕರಣದ ಹಿನ್ನಲೆ
ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರನ್ನು ಹೋಲುವ ವ್ಯಕ್ತಿಯೊಬ್ಬನನ್ನು ಬಳಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಬಗ್ಗೆ ತಯಾರಿಸಿದ್ದ ಅಶ್ಲೀಲ ಚಿತ್ರದ ನಕಲಿ ಸಿ.ಡಿ. ಮತ್ತು ಅವಹೇಳನಕಾರಿ ಬರಹವಿರುವ ಲೇಖನ ಹಂಚುತ್ತಿದ್ದ ಬಗ್ಗೆ ಗೋಕರ್ಣದ ವೆಂಕಟರಮಣ ದೇವಸ್ಥಾನದ ಆಡಳಿತ ಕಾರ್ಯದರ್ಶಿ ಗಣಪತಿ ಕೃಷ್ಣ ಹೆಗಡೆ ಎಂಬವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ 2010ರ ಎ.1ರಂದು ದೂರು ದಾಖಲಿಸಿದ್ದರು. ಅದರಂತೆ ಗೋಪಾಲ್ ಬಿ. ಹೊಸೂರ್ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಸಾಕ್ಷಿ, ಪುವಾಎ ಸಹಿತ ಬಂಧಿಸಿ 14 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಸ್ತುತ ಕುಮಟಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅಂತಿಮ ಹಂತದಲ್ಲಿದೆ. ಆರೋಪಿಗಳು ಕಾನೂನಿನ ಕಬಂಧಬಾಹುಗಳಿಂದ ತಪ್ಪಿಸಿಕೊೞಲು ಮಾಡಿದ ಪ್ರಯತ್ನಗಳೆಲ್ಲವೂ ಅವರ ವಿರುದ್ಧ ಇದ್ದ ಪ್ರಬಲವಾದ ಸಾಕ್ಷಿ, ಪುರಾವೆಗಳಿಂದ ವಿಫಲವಾಗಿದ್ದವು.
ಈ ಮಧ್ಯೆ 2015ರಲ್ಲಿ ಶ್ರೀಕ್ಷೇತ್ರ ಗೋಕರ್ಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಈ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿ, ಗೋಕರ್ಣ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣ ಹಿಂಪಡೆಯುವಂತೆ ಕೋರಿದ್ದರು. ಅದರಂತೆ ಜಾರ್ಜ್ 2015ರ ಎ. 10ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರ ಅಭಿಪ್ರಾಯ ಕೇಳಿದಾಗ, ಇದು ಹಿಂಪಡೆಯಲು ಅರ್ಹವಲ್ಲದ ಪ್ರಕರಣ ಮತ್ತು ಪ್ರಕರಣ ಹಿಂಪಡೆಯಬಾರದು ಎಂದು ಹೇಳಿದ್ದರು.
ಕಾನೂನು ಇಲಾಖೆಯ ಅಭಿಪ್ರಾಯ ಏನಿತ್ತು?
ನಂತರ ಈ ವಿಚಾರದ ಕುರಿತು ಕಾನೂನು ಇಲಾಖೆ ಅಭಿಪ್ರಾಯ ಕೇಳಿದಾಗ ಅದು ಕೂಡ ಪ್ರಕರಣ ಹಿಂಪಡೆಯಲು ಸೂಕ್ತವಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು. ಆರೋಪಿಗಳ ವಿರುದ್ಧದ ದೋಷಾರೋಪಗಳಿಗೆ ಪೂರಕವಾಗಿ ಅಗತ್ಯ ಸಾಕ್ಷ್ಯವಿಲ್ಲದ ಸಂದರ್ಭ ಮತ್ತು ಅಭಿಯೋಜನೆಯಿಂದ ಹಿಂದಕ್ಕೆ ಪಡೆದುಕೊಳ್ಳುವುದರಲ್ಲಿಯೇ ನ್ಯಾಯದ ಹಿತಾಸಕ್ತಿ ಹೆಚ್ಚಿದ್ದಲ್ಲಿ ಅಂತಹ ಮೊಕದ್ದಮೆ ವಾಪಸ್ ಪಡೆಯಬಹುದು. ಈ ಪ್ರಕರಣದಲ್ಲಿ ಅಂತಹ ಯಾವುದೇ ಅಂಶವಿಲ್ಲ. ಮೇಲ್ನೋಟಕ್ಕೆ ಅರೋಪಿಗಳು ಅಪರಾಧ ಕೃತ್ಯ ಎಸಗಿರುವುದು ಕಂಡುಬಂದಿದೆ. ಮೇಲಾಗಿ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯುವಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಹೀಗಾಗಿ ಈ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದರೆ ಸಾರ್ವಜನಿಕರಿಗೆ ಕಾನೂನಿನ ಕುರಿತು ಇರುವ ಗೌರವ ಮತ್ತು ಮೌಲ್ಯಕ್ಕೆ ಕುಂದುಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಆರೋಪಿಗಳಿಗೂ ಕಾನೂನಿನ ಕುರಿತು ಗೌರವ ಇಲ್ಲದೆ ಮತ್ತೆ ಇಂತಹ ಅಪರಾಧಿ ಕೃತ್ಯ ಎಸಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಪ್ರಕರಣ ಹಿಂಪಡೆಯಲು ಸೂಕ್ತ ಕಾರಣ ಇಲ್ಲ ಮತ್ತು ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ ಎಂದು ಹೇಳಿತ್ತು. ಇದೆಲ್ಲವನ್ನೂ ಕಡೆಗಣಿಸಿ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಪ್ರಕರಣ ಹಿಂಪಡೆಯಲು ತೀರ್ಮಾನ ಕೈಗೊಳ್ಳಲಾಗಿತ್ತು. ಅದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿ ಬಳಿಕ ಸರಕಾರ ಆದೇಶ ಹೊರಡಿಸಿದೆ.
ಸರಕಾರದ ಈ ವಿವಾದಿತ ನಿರ್ಧಾರಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಕಾನೂನು ವಲಯದಲ್ಲೀ ಅಚ್ಚರಿ ಮೂಡಿಸಿದೆ. ಸರಕಾರ ಆರೋಪಿಗಳನ್ನು ರಕ್ಷಿಸುವುದೂ ಅಲ್ಲದೆ ಸಂತ್ರಸ್ತರಿಗೆ ನ್ಯಾಯ ದೊರಕುವುದನ್ನು ತಡೆಗಟ್ಟಿದೆ; ಆರೋಪಿಗಳನ್ನು ರಕ್ಷಿಸುವ ಅನಿವಾರ್ಯತೆ ಸರಕಾರಕ್ಕೆ ಯಾಕೆ ಉಂಟಾಯಿತು ಮುಂತಾದ ಪ್ರಶ್ನೆಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಸರಕಾರದ ಮುಂದಿನ ನಡೆ ಏನು ಎಂಬುದು ಕುತೂಹಲಕಾರಿಯಾಗಿದೆ.