November 29, 2015
ಗುರು-ಶಿಷ್ಯರ ಬಂಧ ಬಿಡಿಸಲಾಗದ ಗಂಟುಃ ರಾಘವೇಶ್ವರ ಶ್ರೀ
ಮಠದ ಪದಾಧಿಕಾರಿಗಳ ಬೃಹತ್ ಬದ್ಧತಾ ಸಮಾವೇಶ
ಬೆಂಗಳೂರು : ತಾಯಿ ಮಗುವಿಗೆ ಕರುಳಿನ ಸಂಬಂಧವಿದ್ದಂತೆ ಗುರುಪೀಠಕ್ಕೂ ಶಿಷ್ಯರಿಗೂ ಹೃದಯ-ಆತ್ಮದ ಸಂಬಂಧವಿದೆ. ಈ ಗಂಟು ನಿಜವಾದ ಗಂಟು. ಇದನ್ನು ಎಳೆದಷ್ಟೂ ಗಟ್ಟಿಯಾಗುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಹವ್ಯಕ ಮಹಾಮಂಡಲ ಆಯೋಜಿಸಿದ್ದ ಮಠದ ಪದಾಧಿಕಾರಿಗಳ ಬೃಹತ್ ಬದ್ಧತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ನೀವೆಲ್ಲ ಬದ್ಧತೆ ಮಾಡಿಕೊಳ್ಳಲು ಇಲ್ಲಿ ಬಂದಿಲ್ಲ, ಬದ್ಧತೆ ಮೊದಲಿಂದಲೂ ಇರುವಂತದ್ದು. ಇದು ಮಾಡಿಕೊಂಡ ಸಂಬಂಧವಲ್ಲ. ಮಾಡಿಕೊಂಡ ಸಂಬಂಧವಾಗಿದ್ದರೆ ಆಡಿಕೊಂಡಾಗಲೇ ಹೋಗುತ್ತಿತ್ತು. ತಾಯಿ ಮಗುವಿನ ಮಧ್ಯೆ ಬದ್ಧತೆಯಿರುತ್ತದೆ. ತಾಯಿಕರುಳು ಆ ಸಂಬಂಧವನ್ನು ಬೆಸೆಯುತ್ತದೆ. ಅದು ಜೀವರಸ ಹರಿಯುವ ಸಂಬಂಧ. ತಾಯಿ ಉಂಡರೆ, ಉಸಿರಾಡಿದರೆ ಅದು ಮಗುವಿಗೂ ಸಲ್ಲುತ್ತದೆ. ಅದೇ ರೀತಿ ಗುರುಪೀಠಕ್ಕೂ ಶಿಷ್ಯರಿಗೂ ಹೃದಯ-ಆತ್ಮದ ಸಂಬಂಧವಿದೆ. ಈ ಗಂಟು ನಿಜವಾದ ಗಂಟು. ಇದನ್ನು ದುರ್ಬಲಗೊಳಿಸಲು ಯಾರಾದರೂ ಎಳೆದರೆ ಇದು ಇನ್ನಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ ಎಂದರು.
ಶಂಖನಾದದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮೋಹನ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಬದ್ಧತಾ ಸಂದೇಶವನ್ನು ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಮೋದ ಹೆಗಡೆ ನೀಡಿದರು.
ಪ್ರಮೋದ ಹೆಗಡೆ ಮಾತನಾಡಿ, ಗೋಕರ್ಣದಲ್ಲಿ ಸ್ವಚ್ಛತೆ, ಶಿಸ್ತು, ಸಾವಿರಾರು ಜನರಿಗೆ ನಿತ್ಯ ಊಟದ ವ್ಯವಸ್ಥೆ ಮಾಡಿದ್ದು ಹಲವರ ಕಣ್ಣು ಕೆಂಪಾಯಿಸಿತು. ಗೋಸೇವೆಯಲ್ಲಿ ಮುಂಚೂಣಿ, ಭಾರತದಾದ್ಯಂತ ಸಂಚರಿಸಿ ಗೋವಿನ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿದ್ದು ಎಲ್ಲಾವನ್ನೂ ಸಹಿಸದ ಕೆಲ ಶಕ್ತಿಗಳು ಸೇರಿ ಷಡ್ಯಂತ್ರ ರೂಪಿಸಿದ್ದಾರೆ. ಅತ್ಯಂತ ಬಲವಾದ ಸಾಕ್ಷಿಗಳಿದ್ದರೂ ನಕಲಿ ಸಿಡಿ ಮೊಕದ್ದಮೆಯನ್ನು ಹಿಂದೆ ಪಡೆದ ಸರ್ಕಾರದ ನಿರ್ಧಾರ ಸರಿಯಲ್ಲ. ಶ್ರೀಗಳ ಗೌರವ ಕಾಪಾಡಲು ಪ್ರಾಣ ನೀಡಲೂ ಸಿದ್ದರಾಗಿದ್ದೇವೆ. ನಾವೆಲ್ಲ ಒಗ್ಗಟ್ಟಾಗಿರಬೇಕು. ನಮ್ಮನ್ನು ಒಡೆಯಲು ಪ್ರಯತ್ನಗಳು ನಡೆಯುತ್ತಿದೆ, ನಾವು ಅದಕ್ಕೆ ಬಗ್ಗದೆ, ಶ್ರೀಪೀಠಕ್ಕೆ ಬದ್ದರಾಗಿರೋಣ ಎಂದರು.
ಬದ್ಧತಾ ಸಮಾವೇಶದಲ್ಲಿ ಶ್ರೀಗಳು
ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಂದೇಶದ ಪ್ರಮುಖಾಂಶಗಳುಃ
* ಇದು
ಬದ್ಧತಾ ಸಮಾವೇಶ. ಇಲ್ಲಿ ಬಂದಿರುವವರೆಲ್ಲಾ ನೂರಾರು ಜನರ ಸಾವಿರಾರು ಜನರ್ ಪ್ರತಿನಿಧಿಗಳು. ಇದು ಸರೋವರದಂತೆ ಕಂಡರೂ ಸಾಗರ. ಇಲ್ಲಿ ಒಬ್ಬ ವ್ಯಕ್ತಿ ನೂರು ಜನಕ್ಕೆ, ಸಾವಿರ ಜನಕ್ಕೆ ಸಮ.
* ನಮ್ಮ ಗುರುಗಳು ಎಲ್ಲಾ ಕಠಿಣ ಪರೀಕ್ಷೆಗಳನ್ನು ಮಾಡಿಯೇ ನಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದು. ಇದು ಕೆಂಡುದ ಹಾದಿ. ಇಲ್ಲಿ ಬಂದ ಮೇಲೆ ಕೆಂಡದ ಮೇಲೆ ಮಲಗಬೇಕಾಗುತ್ತದೆ. ಕೆಂಡವನ್ನೇ ಹೊದೆಯ ಬೇಕಾಗುತ್ತದೆ. ಕೆಂಡದ ಮೇಲೆ ಉರುಳು ಸೇವೆ ಮಾಡಬೇಕಾಗುತ್ತದೆ.
* ಯಾರು ಸಾವಿರಾರು ಜನರ ದುಃಖವನ್ನು ಸ್ವೀಕರಿಸುತ್ತಾರೋ ಅವರಿಗೆ ಮಾತ್ರ ಈ ತರಹದ ಕ್ಲೇಶ ಬರುವಂತದ್ದು. ಸಾವಿರಾರು ಜನರಿಗೆ ಆನಂದ ಹಂಚುತ್ತಾರೋ ಅವರಿಗೇ ಈ ಪರೀಕ್ಷೆ. ಅಷ್ಟು ಜನರ ದುಃಖವನ್ನು ವಿಷಕಂಠನಂತೆ ಸ್ವೀಕರಿಸುವವರು ಒಬ್ಬರು ಬೇಕಾಗುತ್ತಾರೆ.
* ಗುರುಪೀಠದ ಸಲುವಾಗಿ ಆಸ್ತಿ, ಪ್ರಾಣ ನೀಡಲು ಅಷ್ಟೇಕೆ ಜೈಲಿಗೆ ಹೋಗಲೂ ಹಿಂಜರಿಯುವುದಿಲ್ಲವೆಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ. ಅದು ನಿಮ್ಮ ಶಕ್ತಿಯ ಸಂಕೇತವಾಗಿದೆ. ಇದೇ ನಮ್ಮ ದೊಡ್ಡ ನಿಧಿ. ನಮ್ಮ ಬದುಕಿನ ಸಂಪಾದನೆ. ನಾವು ಮುತ್ತು-ರತ್ನ- ಚಿನ್ನ ಸಂಪಾದಿಸಿಲ್ಲ. ತಾನಾಗೇ ಬಂದರೂ ಅದನ್ನು ಸದ್ವಿನಿಯೋಗ ಮಾಡಿದ್ದೇವೆ ನಾವು ಸಾವಿರಾರು ಕೋಟಿ ರೂಪಾಯಿ ಬಯಸಲಿಲ್ಲ. ಸಮಾಜವೆಂಬ ನಿಧಿ ಗಳಿಸಿದ್ದೇವೆ. ಮಠದಲ್ಲಿ ಹುಡುಕಿದರೆ ನಿಧಿಯ ಬದಲು ಜನರೇ ಸಿಗುತ್ತಾರೆ.
* ಇಂತಹ ಗುರುಗಳು ನಿಮಗೆ ಮುಂದೆಯೂ ಸಿಗಬಹುದು. ಆದರೆ ಇಂತಹ ಶಿಷ್ಯರು ಯಾವ ಗುರುವಿಗೂ ಸಿಗಲು ಸಾಧ್ಯವಿಲ್ಲ
* ಈ ಪ್ರಕರಣದ ಪ್ರಾರಂಭದಿಂದ ನಿಮ್ಮಲ್ಲಿ ಎಷ್ಟು ಬದ್ಧತೆ ಇದೆ ಎಂದು ನೋಡುತ್ತಾ ಬಂದಿದ್ದೇವೆ. ಇದರಿಂದ ವರ್ಷದಲ್ಲಿ ಒಂದೆರಡು ಬಾರಿ ಮಠಕ್ಕೆ ಬರುತ್ತಿದ್ದವರು, ನಿತ್ಯ ಬರಲು ಪ್ರಾರಂಭಿಸಿದರು. ನಮ್ಮ ಗಿರಿನಗರ ಮಠದಲ್ಲಿ ನಿತ್ಯ ಸಾಫ್ಟವೇರ್ ಇಂಜಿನಿಯರ್ ಗಳು ವಕೀಲರು ಮುಂತಾದವರು ಸ್ವಯಂ ಪ್ರೇರಣೆಯಿಂದ ರಾತ್ರಿ ಕಾವಲು ಪಾಳಿ ಮಾಡುತ್ತಾರೆ. ಎಷ್ಟೋ ಭಕ್ತರು ನಾನು ಈ ಸಮಯದಲ್ಲಿ ಏನು ಮಾಡಲಿ? ನನ್ನ ಆಸಿ, ಮನೆ ಮಾರಲಾ? ನಿಮಗೋಸ್ಕರ ನಮ್ಮ ಪ್ರಾಣವನ್ನೂ ಕೊಡಿತ್ತೇವೆ ಎಂದು ಹೇಳುತ್ತಾರೆ. ಈ ಪ್ರಕರಣ ನಡೆಯದಿದ್ದರೆ ಈ ನಿಮ್ಮ ಭಾವ ಬಹುಶಃ ನಮಗೆ ಗೊತ್ತಾಗುತ್ತಿರಲಿಲ್ಲ.
* ನಾವು ಅಂದೊಂದು ದಿನ ಸಮಾಜದಲ್ಲಿ ನಿಮ್ಮನ್ನು ಗುರುತಿಸಿದೆವು. ಸಮಾಜದಲ್ಲಿ ಸೇವೆ ಮಾಡಲು ನಿಮಗೆ ಅವಕಾಶ ಕೊಟ್ಟೆವು. ಇಂದು ನೀವು ನಮ್ಮನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ.
* ರಾಮನಿಗೆ ವಿವಾಹವಾದ ನಂತರ ನೇರವಾಗಿ ಪಟ್ತಾಭಿಷೇಕವಾಗಿದ್ದರೆ, ನಾವ್ಯಾರೂ ರಾಮನನ್ನು ಇಂದಿನವರೆಗೆ ನೆನಪು ಮಾಡಿಕೊೞುತ್ತಿರಲಿಲ್ಲ. ಅವನೊಬ್ಬ ಉತ್ತಮ ರಾಜನಾಗಿರುತ್ತಿದ್ದ ಅಷ್ಟೇ. ಆದರೆ ಅಷ್ಟೇಲ್ಲ ಕಷ್ಟಗಳನ್ನು ಎದುರಿಸಿ ಅವನು ಪುರುಷೋತ್ತಮನಾದ. ಮುಂದೆ ಎನೋ ಮಹತ್ವದ ಕಾರ್ಯವಾಗಬೇಕಾಗಿದ್ದರಿಂದ ಇದೆಲ್ಲ ಆಗುತ್ತಿದೆ.
* ಏನೂ ಆಗುವುದಿಲ್ಲ ಚಿಂತಿಸಬೇಡಿ ಏಕೆಂದರೆ ಏನೂ ನೆಡೆದಿಲ್ಲ. ಮಠದಲ್ಲಿ ಅಂತಹ ಅಮಂಗಲಕರವಾದದ್ದು ಆಗಲು ಸಾಧ್ಯವಿಲ್ಲ.
* ನಿಮ್ಮ ವ್ಯಾಪ್ತಿಯ ಮನೆಗಳಿಗೆ, ಸಂಸ್ಥೆಗಳಿಗೆ ಹೋಗಿ ಸಮಾಧಾನ ಹೇಳಿ. ಅವರ ಜಿಜ್ನಾಸೆಗೆ ಪರಿಹಾರ ಹೇಳಿ. ಅದಕ್ಕಾಗಿ ಇಲ್ಲಿಂದ ಮಾರ್ಗದರ್ಶನ ಪಡೆದುಕೊೞಿ. ಇದೇ ಬದ್ಧತೆ ಎಂದೂ ಇರಲಿ. ಇಡೀ ಸಮಾಜ ಸಮಷ್ಟಿತಿಂದ ಇರಲಿ ಎಂದೂ ಬಿಡಿ ಬಿಡಿಯಾಗದಂತೆ ನೋಡಿಕೊಳ್ಳಿ. ಅದಕ್ಕಾಗಿಯೇ ನಿಮ್ಮ ಆಯ್ಕೆಯಾಗಿರುವುದು.
* ಸತ್ಯಕ್ಕೆ ಎಂದೂ ಜಯವಿದೆ. ಹರಿಶ್ಚಂದ್ರ ಸತ್ಯವಂತನಾಗಿ ಎಲ್ಲವನ್ನೂ ಕಳೆದುಕೊಂಡ ನಂತರ ಅದರ ಎರಡರಷ್ಟು ತಿರುಗಿ ಬಂತು. ಹಾಗೆಯೇ ಮುಂದೆ ಮಠವೂ ಕೂಡ ಇಮ್ಮಡಿ-ಮುಮ್ಮಡಿ ವೇಗದಲ್ಲಿ ಬೆಳೆಯುವುದನ್ನು ನೀವೆಲ್ಲ ನಿರೀಕ್ಷಿಸಬಹುದು.
* ಸತ್ಯಮೇವ ಜಯತೇ