ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ಒಮ್ಮತದ ದಾರಿ ಮಾತ್ರ ನಮ್ಮ ಮುಂದಿರುವುದು ಎಂದು ಹೇಳಿ ಪ್ರತಿಪಕ್ಷದವರನ್ನು ಮನಒಲಿಸುವ ಪ್ರಯತ್ನ ಮಾಡಿದ್ದಾರೆ.
ಲೋಕಸಭೆಯಲ್ಲಿ ಸಂವಿಧಾನದ ಬದ್ಧತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಲ್ಲಿ ಬಹುತೇಕರು ಯಾರೊಬ್ಬರ ಆಸೆಯನ್ನು ಎಲ್ಲರ ಮೇಲೆ ವಿಧಿಸಲು ಬಯಸುವುದಿಲ್ಲ ಎಂದರು.
ನಾವೆಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು, ಬಹುಮತ-ಅಲ್ಪಮತದಿಂದ ಅಲ್ಲ. ಒಮ್ಮತವೇ ಸಂವಿಧಾನದ ದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಂವಿಧಾನದ ಬಗ್ಗೆ ವಿಮರ್ಶೆಯನ್ನು ತಗೆದುಹಾಕಿದ ಪ್ರಧಾನಿ, ಸಂವಿಧಾನದಲ್ಲಿ ಬದಲಾವಣೆ ತರುವುದನ್ನು ಯೋಚಿಸುವುದು ಆತ್ಮಹತ್ಯೆ ಮಾಡಿಕೊಂಡ ಹಾಗೆ ಎಂದು ನುಡಿದರು.
ಹಿಂದಿನ ಎಲ್ಲಾ ಸರ್ಕಾರಗಳನ್ನೂ ಹೊಗಳಿದ ಪ್ರಧಾನಿ ನರೇಂದ್ರ ಮೋದಿ, ಈ ದೇಶ ತುಂಬಾ ಜನರಿಂದ ಕಟ್ಟಲ್ಪಟ್ಟಿದೆ, ಎಲ್ಲಾ ಸರ್ಕಾರಗಳಿಂದ ಎಂದರು.
ಹಿಂದಿನ ಸರ್ಕಾರಗಳು ಏನೂ ಕೆಲಸ ಮಾಡಿಲ್ಲ ಎಂದು ಯಾರೂ ಕೂಡ ಹೇಳಬಾರದು. ಇದನ್ನು ನಾನು ಇವತ್ತು ಹೇಳುತ್ತಿಲ್ಲ, ಕೆಂಪುಕೋಟೆಯಿಂದಲೇ ಹೇಳಿದ್ದೇನೆ.
ರಾಜ-ಮಹಾರಾಜರು ಈ ದೇಶವನ್ನು ಕಟ್ಟಲಿಲ್ಲ. ಸಾಮಾನ್ಯ ಜನರಿಂದ ಮತ್ತು ಎಲ್ಲಾ ಸರ್ಕಾರಗಳಿಂದ ಈ ದೇಶವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾತಿನಲ್ಲಿ ನೆಹರು ಸೇರಿದಂತೆ ಪ್ರತಿಪಕ್ಷದ ಹಲವು ನಾಯಕರನ್ನು ಹೊಗಳಿದರು.