ಕೌಲಲಾಂಪುರ : ಮೂರು ದಿನಗಳ ಮಲೇಷ್ಯಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾನುವಾರ ಕೌಲಲಾಂಪುರದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಶನಿವಾರ ಪ್ರಧಾನಿ ಮೋದಿ ಅವರು ಆಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ನಂತರ ಚೀನಾ ಮತ್ತು ಜಪಾನ್ ಜೊತೆ ಸಹ ಮಾತುಕತೆ ನಡೆಸಿದ್ದರು.
ಆಸಿಯಾನ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆಯನ್ನು ಎದುರಿಸಲು ಆಸಿಯಾನ್ ನಡುವೆ ಪರಸ್ಪರ ಸಹಕಾರವನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.
ಚೀನಾ ಪ್ರೀಮಿಯರ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಅವರು, ಭಯೋತ್ಪಾದನೆಯ ಬೆದರಿಕೆ ಎದುರಿಸಲು ಎರಡೂ ದೇಶಗಳೂ ಕಾರ್ಯತಂತ್ರದ ಸಮನ್ವಯತೆಯನ್ನು ಹೆಚ್ಚಿಸಬೇಕೆಂದು ತಿಳಿಸಿದರು.
ಜಪಾನಿನ ಪ್ರಧಾನಿ ಶಿಂಜೋ ಅಬೆ ಜೊತೆ ಪ್ರಮುಖ ಸಮಸ್ಯೆಗಳಾದ ಪ್ರಾದೇಶಿಕ ಸಂಪರ್ಕ, ಕಡಲ ತೀರದ ಭದ್ರತೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ವಿವಾದಗಳು ಕುರಿತು ಮಾತುಕತೆ ನಡೆಸಿದರು.