ನವದೆಹಲಿ : ಕಳೆದ ಶುಕ್ರವಾರ ಪ್ಯಾರಿಸ್ ನಲ್ಲಿ 129 ಜನರ ಮರಣಹೋಮಕ್ಕೆ ಕಾರಣವಾದ ಐಸಿಸ್ ಉಗ್ರರ ಅಟ್ಟಹಾಸದ ನಂತರ, ಭಾರತ ಇಸ್ಲಾಮಿಕ್ ಸ್ಟೇಟ್ ( ಐಸಿಸ್ ) ಬೆದರಿಕೆಯಿಂದ ಜಾಗೃತವಾಗಿರಬೇಕು, ಭಾರತದಲ್ಲಿ ದಾಳಿ ನಡೆಸುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಭಯೋತ್ಪಾದಕ ಸಂಘಟನೆಯ ಮೂಲಕ ದೇಶದಲ್ಲಿ ಸಂಭವನೀಯ ದಾಳಿಯ ಎಚ್ಚರಿಕೆ ನೀಡಿದ್ದಾರೆ.
ಐಸಿಸ್ ಯಾವುದೇ ನಿರ್ದಿಷ್ಟ ದೇಶಕ್ಕೆ ಸವಾಲು ಅಲ್ಲ, ಇಡೀ ಪ್ರಪಂಚಕ್ಕೆ ಸವಾಲು. ಈ ದಿಶೆಯಲ್ಲಿ ಭಾರತ ಜಾಗೃತವಾಗಿದೆ ಎಂದು ದೆಹಲಿಯಲ್ಲಿ ರಾಜನಾಥ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಾಳಿ ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ. ಅಲ್ಲದೆ, ಐಸಿಸ್ ಸಂಪರ್ಕ ಹೊಂದಿದ್ದ ಕೆಲ ಅನುಮಾನಾಸ್ಪದ ವ್ಯಕ್ತಿಗಳ ಮೇಲೂ ಕಣ್ಣಿಟ್ಟಿದೆ.