ಚೆನ್ನೈ : ತೀವ್ರ ಮಳೆ ಕೊರತೆಯಿಂದಾಗಿ ಮುಕ್ಕಾಲು ಭಾಗ ಕರ್ನಾಟಕ ಬರಗಾಲ ಎದುರಿಸುತ್ತಿರುವಾಗಲೇ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಕಾವೇರಿ ನೀರಿನ ವಿಷಯವಾಗಿ ಕ್ಯಾತೆ ತೆಗೆದಿದ್ದಾರೆ. ತಮಿಳುನಾಡಿಗೆ ಸಿಗಬೇಕಿರುವ ನೀರನ್ನು ಕರ್ನಾಟಕ ಸರ್ಕಾರ ಬೇಕಂತಲೇ ಹರಿಸುತ್ತಿಲ್ಲ. ಆದ್ದರಿಂದ, ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪನ್ನು ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆ.3ರಂದು ಜಯಲಲಿತಾ ಪತ್ರ ಬರೆದಿದ್ದಾರೆ.
ಅಲ್ಲದೆ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಕರ್ನಾಟಕದ ನಾಲ್ಕು ಅಣೆಕಟ್ಟೆಗಳಲ್ಲಿ ಸಾಕಷ್ಟು ನೀರಿದ್ದು, ಅದನ್ನು ಕಳೆದ ಜುಲೈನಿಂದಲೂ ಕರ್ನಾಟಕ ನೀರಾವರಿಗೆ ಬಳಸಿಕೊಳ್ಳುತ್ತಿದೆ ಎಂದು ಸುಳ್ಳು ಆರೋಪವನ್ನು ಹೊರಿಸಿದ್ದಾರೆ. ಅಲ್ಲದೆ, ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿಗಳನ್ನು ಸ್ಥಾಪಿಸುವಂತೆಯೂ ಒತ್ತಡ ಹೇರಿದ್ದಾರೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 94 ಟಿಎಂಸಿ ನೀರು ಹರಿದುಬರಬೇಕಿತ್ತು. ಆದರೆ ಆ.31ರವರೆಗೆ 66.443 ಟಿಎಂಸಿ ನೀರನ್ನು ಮಾತ್ರವೇ ಹರಿಸಲಾಗಿದೆ. ಇದರಿಂದಾಗಿ 27.557 ಟಿಎಂಸಿ ನೀರಿನ ಕೊರತೆಯಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ಕಾವೇರಿ ಐತೀರ್ಪಿನ ಪ್ರಕಾರ ತಮಿಳುನಾಡಿಗೆ ಕಾನೂನುಬದ್ಧವಾಗಿ ಸಿಗಬೇಕಿರುವ ನೀರನ್ನು ಹರಿಸುವ ಬದಲು, ಕರ್ನಾಟಕ ಸರ್ಕಾರ ತನ್ನ ಜಲಾಶಯಗಳಲ್ಲಿರುವ ಎಲ್ಲ ನೀರನ್ನು ಬಳಸಿಕೊಳ್ಳುತ್ತಿದೆ. ತನ್ಮೂಲಕ ಕಾವೇರಿ ನದಿ ತನ್ನ ಮಾಲೀಕತ್ವದ್ದು ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಕಾವೇರಿಯಿಂದ 25 ಟಿಎಂಸಿ ನೀರು ಬಿಡುಗಡೆ ಮಾಡಿಸುವಂತೆ ಕೋರಿ ಪ್ರಧಾನಮಂತ್ರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪತ್ರ ಬರೆದಿರುವ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 40 ವರ್ಷಗಳಲ್ಲೇ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ಅರ್ಧದಷ್ಟು ಮಾತ್ರ ನೀರಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಮಳೆ ಬಂದಾಗಲೆಲ್ಲಾ ತಮಿಳುನಾಡಿಗೆ ನೀರು ಕೊಟ್ಟಿದ್ದೇವೆ. ಕಳೆದ ಜೂನ್, ಜುಲೈ ತಿಂಗಳಲ್ಲೂ ತಮಿಳುನಾಡಿಗೆ ಸಾಕಷ್ಟು ನೀರು ಕೊಟ್ಟಿದ್ದೇವೆ. ಈಗ ಮಳೆ ಇಲ್ಲದೆ, ನಮ್ಮ ಜಲಾಶಯಗಳಲ್ಲೇ ನೀರಿಲ್ಲದ ಈ ಸಂದರ್ಭದಲ್ಲಿ ಸಂಕಷ್ಟ ಸೂತ್ರದಂತೆ ತಮಿಳುನಾಡು ನಮ್ಮ ಕಷ್ಟವನ್ನು ಹಂಚಿಕೊಳ್ಳಬೇಕು. ಅದನ್ನು ಬಿಟ್ಟು ನೀರು ಕೇಳುವುದು ಸರಿಯಲ್ಲ. ಕುಡಿಯುವ ನೀರಿಗೆ ನಮ್ಮ ಆದ್ಯತೆ. ರಾಜ್ಯದ ಬರ ಪರಿಸ್ಥಿತಿಯನ್ನು ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ದು ವಿವರಿಸಿದ್ದೇವೆ. ಕಾವೇರಿ ಐ ತೀರ್ಪಿನಂತೆ ವಾರ್ಷಿಕ 192 ಟಿಎಂಸಿ ನೀರು ಕೊಡಲಾಗುತ್ತಿದೆ. ಹೀಗಿದ್ದರೂ ಬರದ ಸಂದರ್ಭದಲ್ಲಿ ನೀರಿಗೆ ಬೇಡಿಕೆಯಿಡುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.