ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆಯ ಭಾರೀ ಗುಂಡಿನ ದಾಳಿಗೆ 3 ನಾಗರಿಕರು ಹತ್ಯೆಯಾಗಿದ್ದು, 16 ಜನರು ಗಾಯಗೊಂಡಿದ್ದಾರೆ.
ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೇನೆ ಶುಕ್ರವಾರ ಭಾರತದತ್ತ ತನ್ನ ಗುಂಡಿನ ದಾಳಿಯನ್ನು ತೀವ್ರಗೊಳಿಸಿದೆ.
'ಪಾಕಿಸ್ತಾನ ಸೇನೆ ಜಮ್ಮು ಜಿಲ್ಲೆಯ ಅರ್.ಎಸ್.ಪುರ ವಿಭಾಗದ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಗೊತ್ತುಗುರಿಯಿಲ್ಲದೆ ನಡೆಸಿದ ಭಾರೀ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಸತ್ತಿದ್ದು, 16 ಜನರು ಗಾಯಗೊಂಡಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸತ್ತಿರುವವರನ್ನು ಸಾಯಿ ಖುರ್ಡ್ ಹಳ್ಳಿಯ ಸುಭಾಷ್ ಚಂದರ್ (45), ಬಿಮ್ಲಾ ದೇವಿ (42), ಮತ್ತು ಅಬ್ದುಲ್ಲಿಯಾನ್ ಹಳ್ಳಿಯ ಪವನ್ ಕುಮಾರ್ (55) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಶುಕ್ರವಾರ ನಡುರಾತ್ರಿ ವೇಳೆಗೆ ಪಾಕಿಸ್ತಾನ ಸೇನೆ ಗುಂಡಿನ ದಾಳಿ ಆರಂಭಿಸಿದ್ದು, ಇತ್ತೀಚಿನ ವರದಿ ಬರುವವರೆಗೂ ಎರಡೂ ಸೇನೆಗಳ ಮಧ್ಯೆ ಗುಂಡಿನ ಚಕಮಕಿ ಮುಂದುವರಿದಿದೆ.
ಪೊಲೀಸ್ ಮೂಲಗಳ ಪ್ರಕಾರ ಪಾಕಿಸ್ತಾನ್ ಸೇನೆ ಸ್ವಯಂಚಾಲಿತ ಹಾಗೂ ಮಷೀನ್ ಗನ್ ಗಳನ್ನು ಯದ್ವಾತದ್ವಾ ಉಪಯೋಗಿಸಿದೆ. ಹಲವಾರು ನಾಗರಿಕ ಪ್ರದೇಶಗಳು ಈ ದಾಳಿಗೆ ತುತ್ತಾಗಿವೆ.
ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತ್ತಿದೆ ಎಂದು ವರದಿ ತಿಳಿಸಿದೆ.