ಅಬುಧಾಬಿ : ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿಯ ಸಂದರ್ಭದಲ್ಲಿ ರಾಜಧಾನಿ ಅಬುಧಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಜಾಗ ನೀಡಲು ಯುಎಇ ಸರ್ಕಾರ ನಿರ್ಧಾರ ಮಾಡಿದೆ. ಬಹಳ ವರ್ಷಗಳಿಂದ ಭಾರತೀಯ ಸಮುದಾಯ ಈ ಒಂದು ಅನುಮೋದನೆಗಾಗಿ ಕಾಯುತ್ತಿತ್ತು.
ಈ ಮಹತ್ವದ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಸರಕಾರಕ್ಕೆ ಧನ್ಯವಾದ ಹೇಳಿದ್ದಾರೆ.
ಭಾರತೀಯ ಸಮುದಾಯದ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ, ಯುಎಇ ಸರ್ಕಾರ ದೇವಾಲಯ ನಿರ್ಮಾಣಕ್ಕೆ ಅಬುಧಾಬಿಯಲ್ಲಿ ಜಾಗ ನೀಡಲು ನಿರ್ಧರಿಸಿದೆ ಎಂದು ವಿದೇಶಾಂಗ ಖಾತೆಗಳ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ತಮ್ಮ ಎರಡು ದಿನಗಳ ಪ್ರವಾಸದಲ್ಲಿ ಭಾನುವಾರ ಅಬುಧಾಬಿ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರು, ಶೇಖ್ ಝಾಯೇದ್ ಗ್ರಾಂಡ್ ಮಸೀದಿಗೆ ಭೇಟಿ ನೀಡಿದರು. ಈ ಮಸೀದಿ ಜಗತ್ತಿನ 3ನೇ ಅತೀ ದೊಡ್ಡ ಮಸೀದಿಯಾಗಿದೆ.
'ಹೆಲೋ ಯುಎಇ, ನಾನು ಈ ಭೇಟಿಯ ಬಗ್ಗೆ ಬಹಳ ಆಶಾವಾದಿಯಾಗಿದ್ದೇನೆ. ಈ ಭೇಟಿಯಿಂದ ಭಾರತ-ಯುಎಇ ಸಂಬಂಧ ವೃದ್ಢಿಸುತ್ತದೆ ಎನ್ನುವ ವಿಶ್ವಾಸ ನನಗಿದೆ' ಎಂದು ಯುಎಇ ಗೆ ಆಗಮಿಸಿದ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಅವರು ಅರೇಬಿಕ್ ಭಾಷೆಯಲ್ಲಿ ಸಹ ಟ್ವೀಟ್ ಮಾಡಿದರು.
ಅಬುಧಾಬಿಯ ಯುವರಾಜ ಶೇಕ್ ಮೊಹಮದ್ ಬಿನ್ ಜಯೇದ್ ಅಲ್ ನಃಯಾನ್ ಮತ್ತು ಅವರ ಐವರು ಸಹೋದರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ವಿಮಾನ ನಿಲ್ದಾಣದಲ್ಲಿ ನನ್ನನ್ನು ಬರಮಾಡಿಕೊಂಡ ಶೇಕ್ ಮೊಹಮದ್ ಬಿನ್ ಜಯೇದ್ ಅಲ್ ನಃಯಾನ್ ಅವರ ಒಳ್ಳೆಯತನವನ್ನು ಪ್ರಶಂಸಿಸುತ್ತೇನೆ ಎಂದೂ ಸಹ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಸೋಮವಾರ, ದುಬೈ ಕ್ರಿಕೇಟ್ ಸ್ಟೇಡಿಯಂನಲ್ಲಿ ಸುಮಾರು 50000 ಭಾರತೀಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಸುಮಾರು 2.6 ಮಿಲಿಯನ್ ಭಾರತೀಯರು ಯುಎಇ ಅಲ್ಲಿ ವಾಸಿಸುತ್ತಾರೆ. 34 ವರ್ಷಗಳ ನಂತರ ಭಾರತದ ಪ್ರಧಾನಿಯ ಭೇಟಿ ಇದಾಗಿದೆ.