ನವದೆಹಲಿ : ನಿರಂತರ ಪ್ರತಿಭಟನೆ ನಡೆಸಿ ಮೂರು ವಾರಗಳ ಸಂಸತ್ ಕಲಾಪಕ್ಕೆ ಆಡ್ಡಿ ಮಾಡಿದ ಕಾಂಗ್ರೆಸ್, ತನ್ನ ನಾಯಕರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೇಲೆ ಮಾಡಿದ ದಾಳಿಗೆ ಪ್ರತಿಸ್ಪರ್ಧೆ ಕೊಟ್ಟಂತೆ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಒಂದು ಕುಟುಂಬವನ್ನು ಉಳಿಸಲು ಬಯಸುತ್ತದೆ, ಆದರೆ ಬಿಜೆಪಿ ರಾಷ್ಟ್ರವನ್ನು ಉಳಿಸಲು ಬಯಸುತ್ತದೆ ಎಂದು ಗುರುವಾರ ಬಿಜೆಪಿ ಮತ್ತು ಮಿತ್ರಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು.
ಅಲ್ಲದೆ, ಕಾಂಗ್ರೆಸ್ ಸಂಸತ್ ಕಲಾಪವನ್ನು ನಡೆಯಲು ಬಿಡದೆ ದೇಶದ ಆರ್ಥಿಕ ಅಭಿವೃದ್ಧಿಗೆ ತಡೆಯೊಡ್ದುತ್ತಿರುವ ವಿಚಾರವನ್ನು ದೇಶದ ಜನರಿಗೆ ಮನದಟ್ಟುಮಾಡಿಕೊಡಬೇಕೆಂದು ಪ್ರಧಾನಿ ಪಕ್ಷದ ಸಂಸದರು ಹಾಗೂ ಸಚಿವರುಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಳಿ, 'ಇಡೀ ದೇಶ ಇಂದು ಕಾಂಗ್ರೆಸ್ ಮತ್ತು ಅದನ್ನು ನಿಯಂತ್ರಿಸುತ್ತಿರುವ ಕುಟುಂಬದ ಬಗ್ಗೆ ಜಾಗೃತವಾಗಿದೆ' ಎಂದರು. ಮುಂಗಾರು ಅಧಿವೇಶನದ ಅವಧಿಯುದ್ದಕ್ಕೂ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆಯ ನೇತೃತ್ವ ವಹಿಸಿದ ಸೋನಿಯಾ ಗಾಂಧಿಯನ್ನುದ್ದೇಶಿಸಿ ಅರುಣ್ ಜೇಟ್ಲಿ, 'ಒಂದು ರಾಷ್ಟ್ರೀಯ ಪಕ್ಷದ ಪರಮೋಛ್ಚ ನಾಯಕ(ಕಿ) ಸಂಸತ್ತಿನ ಬಾವಿಯೊಳಗೆ ನುಗ್ಗಿ ಪ್ರತಿಭಟನೆ ಮಾಡಿದ್ದು ಇತಿಹಾಸದಲ್ಲೇ ಇದು ಮೊದಲು' ಎಂದರು.
ಕಾಂಗ್ರೆಸ್ ಸಂಸತ್ ಕಲಾಪಕ್ಕೆ ಆಡ್ಡಿಮಾಡಿ, ದೇಶದ ಆರ್ಥಿಕ ಬೆಳವಣಿಗೆಗೆ ಅಡ್ಡಿ ತಡೆಯೊಡ್ಡಿದೆ ಎಂದು ಆರೋಪಿಸಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಸಂಸದರು ಸಂಸತ್ತಿನ ಹೊರಗೆ 'ಪ್ರಜಾಸತ್ತೆಯನ್ನು ಉಳಿಸಿ' ಎಂಬ ಮೆರವಣಿಗೆ ನಡೆಸಿದರು.
ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ಸಂಸತ್ತು ಅನಿರ್ಧಿಷ್ಠಾವಧಿಗೆ ಮುಂದೂಡಲ್ಪಟ್ಟಿತು. ಅಲ್ಲಿಗೆ ಬಹಳ ನಿರೀಕ್ಷೆಯಿಂದ ಕಾದಿದ್ದ ಜಿ.ಎಸ್.ಟಿ. (ಸರಕು ಮತ್ತು ಸೇವಾ ತೆರಿಗೆ) ಮಸೂದೆ ಅಂಗೀಕಾರವಾಗುವ ಅವಕಾಶ ತಪ್ಪಿತು.
ಸುಷ್ಮಾ ಸ್ವರಾಜ್, ವಸುಂಧರ ರಾಜೇ ಹಾಗೂ ಶಿವರಾಜ್ ಸಿಂಗ್ ಚೌಹಾನ್ ಅವರುಗಳ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನೆಗೆ ಸರಕಾರ ಸೊಪ್ಪು ಹಾಕಲಿಲ್ಲ. ಪ್ರತಿಭಟನೆ ತೀವ್ರ ಸ್ವರೂಪ ತೆಗೆದುಕೊಂಡು ಸಂಸತ್ತಿನ ಒಳಗೆ ಅಶಿಸ್ತು ಮೆರೆದ 25 ಕಾಂಗ್ರೆಸ್ ಸದಸ್ಯರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ 5 ದಿನಗಳಿಗೆ ಅಮಾನತ್ತು ಮಾಡಿದ್ದರು. ಪ್ರತಿಭಟನೆ ಇನ್ನೂ ಮುಂದುವರಿದು ಯಾವುದೇ ಕಲಾಪವೂ ನಡೆಯದಂತೆ ಕಾಂಗ್ರೆಸ್ ನಿರಂತರವಾಗಿ ಅಡ್ಡಿಪಡಿಸಿತು.