ನವದೆಹಲಿ : 2014ರ ಚುನಾವಣಾ ಸೋಲನ್ನು ಅರಗಿಸಿಕೊಳ್ಳಲು ಗಾಂಧಿ ಪರಿವಾರಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೇಶದ ಪ್ರಗತಿಗೆ ಅವರು ತಡೆಯೊಡ್ಡುತ್ತಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸೋನಿಯಾ-ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆ ರಾಜ್ಯಸಭೆಯಲ್ಲಿ ಮಹತ್ವದ ಜಿ.ಎಸ್.ಟಿ ಮಸೂದೆಯನ್ನು ಸರಕಾರ ಮಂಡಿಸಿತು. ಆದರೆ ಕಾಂಗ್ರೆಸ್ ಸದಸ್ಯರು ಮಸೂದೆಯ ಅಂಗೀಕಾರಕ್ಕೆ ವಿರೋಧಿಸಿ ಕಲಾಪಕ್ಕೆ ಅಡ್ದಿಪಡಿಸಿದ ಹಿನ್ನಲೆಯಲ್ಲಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಯಿತು.
ಸರಕು ಮತ್ತು ಸೇವಾ ತೆರಿಗೆ ಮಸೂದೆ ದೇಶದಲ್ಲಿ ಎಲ್ಲ ರೀತಿಯ ಪರೋಕ್ಷ ತೆರಿಗೆಗಳ ಬದಲಿಗೆ ನೇರವಾದ ತೆರಿಗೆ ವ್ಯವಸ್ಥೆಗೆ ದಾರಿಮಾಡಿಕೊಡುತ್ತದೆ. ಮಾತ್ರವಲ್ಲ ಇದರಿಂದ ಆರ್ಥಿಕ ಪ್ರಗತಿಗೆ ಉತ್ತೇಜನ ದೊರಕುವುದೂ ಮಾತ್ರವಲ್ಲದೆ ಬೆಲೆ ಇಳಿಕೆಯೂ ಸಾಧ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ನೀತಿಗಳು ದೇಶಕ್ಕೆ ಹೊರಯಾಗಿದ್ದು ಕಾಂಗ್ರೆಸ್ ಪ್ರತ್ಯೇಕಿತವಾಗುತ್ತಿದೆ ಎಂದು ಅರುಣ್ ಜೇಟ್ಳಿ ಹೇಳಿದರು.
'ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿಗೆ ಬಂದರೆ ಜಿಡಿಪಿ ಹೆಚ್ಚಲಿದೆ. ಇದು ಆರ್ಥಿಕ ತಜ್ನರ ಒಮ್ಮತದ ಅಭಿಪ್ರಾಯ. ಆದರೆ ಯಾವುದೋ ಕಾರಣಕ್ಕಾಗಿ ಕಾಂಗ್ರೆಸ್ ಗೆ ಇದು ಬೇಕಾಗಿಲ್ಲ' ಎಂದು ಜೇಟ್ಲಿ ನುಡಿದರು.
'ಕಾಂಗ್ರೆಸ್ ಅಧಿಕಾರದಲ್ಲಿರುವಾರ ಅದರ ಆರ್ಥಿಕ ನೀತಿಗಳು ದೇಶದ ಆರ್ಥಿಕತೆಗೆ ಹೊರೆಯಾಗಿದ್ದವು. ಪ್ರತಿಪಕ್ಷದಲ್ಲಿದ್ದರೂ ಅದರ ನೀತಿಗಳು ಈಗಲೂ ದೇಶದ ಆರ್ಥಿಕತೆಗೆ ಮಾರಕವಾಗಿವೆ' ಎಂದು ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆಯ ಕಾರಣಕ್ಕಾಗಿ ರಾಜ್ಯಸಭೆ ಮುಂದೂಡಲ್ಪಟ್ಟ ನಂತರ ಮಾಧ್ಯಮ ವರದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ತನ್ನ ತಡೆ ಒಡ್ಡುವ ನೀತಿಯಿಂದಾಗಿ ಈಗ ಪ್ರತ್ಯೇಕವಾಗಿ ನಿಲ್ಲುವ ಸ್ಥಿತಿ ಒದಗಿದೆ. ಅದಕ್ಕೆ ಬೇರೆ ಯಾವ ಪಕ್ಷವೂ ಬೆಂಬಲ ನೀಡಲು ಸಿದ್ದವಿಲ್ಲ.
ಸೋನಿಯಾ ಮತ್ತು ರಾಹುಲ್ ಗಾಂಧಿಯವರನ್ನು ಹೆಸರಿಸದೆ, 'ಇಬ್ಬರು ನಾಯಕರು 2014ರ ಚುನಾವಣಾ ಸೋಲನ್ನು ಅತ್ಯಂತ ಕೆಟ್ಟದಾಗಿ ಪರಿಗಣಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಗಾಂಧಿ ಪರಿವಾರದ ಹೊರಗಿನಿಂದ ಯಾರೇ ಆದರೂ ಈ ದೇಶವನ್ನು ಆಳುವುದು ಅವರಿಗೆ ಸಹ್ಯವಿಲ್ಲ' ಎಂದು ಜೇಟ್ಳಿ ಕುಟುಕಿದರು.
ಮುಂಗಾರು ಅಧಿವೇಶನ ಇದೇ ಗುರುವಾರ ಮುಗಿಯಲಿದ್ದು ಜೇಟ್ಳಿ ಮಂಗಳವಾರ ಸರಕು ಮತ್ತು ಸೇವಾ ತೆರಿಗೆ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಲೋಕಸಭೆಯಲ್ಲಿ ಈ ಮಸೂದೆ ಈಗಾಗಲೇ ಅಂಗೀಕಾರವಾಗಿದೆ. ಕಾಂಗ್ರೆಸ್ ಸದಸ್ಯರ ಅಡ್ಡಿ, ಕೂಗಾಟದಿಂದಾಗಿ ಮಸೂದೆ ಮೇಲಿನ ಚರ್ಚೆ ಸಾಧ್ಯವಾಗಲಿಲ್ಲ.
ಪ್ರತಿಭಟನಾ ಫಲಕಗಳನ್ನು ಹಿಡಿದು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ ಸದಸ್ಯರ ವರ್ತನೆಗೆ ತೀವ್ರ ಬೇಸರಗೊಂಡ ಸ್ಪೀಕರ್ ಈ ದೃಶ್ಯಗಳನ್ನು ನೇರವಾಗಿ ಟಿವಿಯಲ್ಲಿ ಪ್ರಸಾರ ಮಾಡುವಂತೆ ಸೂಚಿಸಿದರು.